ಕಾರವಾರ: ಭಾರತೀಯ ನೌಕಾನೆಲೆ ಯೋಜನೆಯಿಂದ ನಿರಾಶ್ರಿತರಾದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಚಂಡಿಯಾ, ಅರಗಾ, ಮುದಗಾ ಮೊದಲಾದ ಗ್ರಾಮದ ಜನ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
ಸೀಬರ್ಡ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಇನ್ನು ಭೂ ಪರಿಹಾರ ದೊರೆತಿಲ್ಲ. ಉದ್ಯೋಗದಲ್ಲಿಯೂ ಮೀಸಲಾತಿ ಸಿಕ್ಕಿಲ್ಲ. ಹಿಂದಿನಿಂದಲೂ ಮೀನುಗಾರಿಕೆ, ಕೃಷಿ, ಕೂಲಿಯನ್ನು ಮಾಡುತ್ತಿದ್ದ ಜನ ಆರ್ಥಿಕವಾಗಿ ಹಿಂದೂಳಿದಿದ್ದು ಇವರ ಅಭಿವೃದ್ದಿಗೆ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು. ದೇಶದ ರಕ್ಷಣೆಗಾಗಿ ಕಾರವಾರದಲ್ಲಿ ನೌಕಾನೆಲೆ ಸ್ಥಾಪಿಸಲಾಯಿತು. ಇದಕ್ಕಾಗಿ ಬಡವರನ್ನು ಒಕ್ಕಲೆಬ್ಬಿಸಲಾಯಿತು. ದೇಶಕ್ಕಾಗಿ ಭೂಮಿ ಕೊಟ್ಟವರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಭೂಮಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಅಂದು ದೇಶಕ್ಕಾಗಿ ಭೂಮಿ ತ್ಯಾಗ ಮಾಡಿದವರು ಇಂದಿಗೂ ನಿರಾಶ್ರಿತರಾಗಿಯೇ ಬದುಕು ಸಾಗಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಯೋಜನೆಯಿಂದ ನಿರಾಶ್ರಿತರಾದವರಿಗೆ ಬೇರೆಡೆ ಭೂಮಿ, ಪರಿಹಾರ ಹಾಗೂ ಉದ್ಯೋಗ ನೀಡುವದಾಗಿ ನಂಬಿಸಲಾಗಿತ್ತು. ಆದರೆ ಈ ವರೆಗೂ ಸೂಕ್ತ ಭೂಮಿ ದೊರೆತಿಲ್ಲ. ಪರಿಹಾರವೂ ಪೂರ್ತಿಯಾಗಿ ಕೊಡಲಿಲ್ಲ. ಉದ್ಯೋಗವನ್ನು ನೀಡದೇ ವಂಚಿಸಲಾಗಿದೆ ಎಂದು ದೂರಿದರು. ಇಲ್ಲಿನ ಜನ ಕೆಲಸಕ್ಕಾಗಿ ನಿತ್ಯ ಗೋವಾಗೆ ಅಲೆಯುವಂತಾಗಿದೆ. ಅಲ್ಲಿನ ಕೆಲಸಕ್ಕೆ ಭದ್ರತೆಯೂ ಇಲ್ಲ. ಹೀಗಾಗಿ ಸೀಬರ್ಡ ನೌಕಾನೆಲೆಯಲ್ಲಿಯೇ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸೀಬರ್ಡ ನೌಕಾನೆಲೆ ಸುತ್ತಲಿನ ಪ್ರದೇಶದಲ್ಲಿ ಮೀನುಗಾರರಿಗೂ ಅವಕಾಶವಿಲ್ಲ. ನೌಕಾನೆಲೆಯವರು ವಿವಿಧ ಷರತ್ತುಗಳನ್ನು ವಿಧಿಸಿರುವದರಿಂದ ಮೀನುಗಾರಿಕೆಗೂ ಹಿನ್ನಡೆಯಾಗಿದೆ ಎಂದು ಆರೋಪಿಸಿದರು.
ಸೀಬರ್ಡ ನೌಕಾನೆಲೆಯಲ್ಲಿ ಸೀಬರ್ಡ ನಿರಾಶ್ರಿತರಿಗೆ ಹಾಗೂ ಸ್ಥಳೀಯರಿಗೆ ಶೇ. 70 ರ ಮೀಸಲಾತಿ ಪ್ರಕಟಿಸಬೇಕು. ನೌಕಾನೆಲೆ ಉದ್ಯೋಗ ಸಂದರ್ಶನವನ್ನು ಕಾರವಾರದಲ್ಲಿ ನಡೆಸಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಖಾಸಗಿ ಕಂಪನಿಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ಕೊಡಬೇಕು. ಟೆಂಡರ್ ಪ್ರಕ್ರಿಯೆಗಳಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳಿಗೂ ಅವಕಾಶ ನೀಡಬೇಕು. ಟೆ<ಡರ್ ಪ್ರಕ್ರಿಯೆ ನೋಟಿಸ್ ಸ್ಥಳೀಯ ಭಾಷೆ ಪತ್ರಿಕೆಯಲ್ಲಿಯೇ ಜಾಹಿರಾತು ನೀಡಬೇಕು ಎಂದು ಆಗ್ರಹಿಸಿದರು. ಕೂಲಿ ಕಾರ್ಮಿಕರಿಗೆ ಸೂಕ್ತ ವೇತನ ಹಾಗೂ ಬತ್ಯೆ ನೀಡಬೇಕು ಎಂದು ಆಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಮನವಿ ಸ್ವೀಕರಿಸಿದರು. ನವಶಕ್ತಿ ಸಂಘ ಹಾಗೂ ಸೀಬರ್ಡ ನಿರಾಶ್ರಿತರ ಮತ್ತು ಕಟ್ಟಡ ಕೂಲಿ ಕಾರ್ಮಿಕರ ಸಂಘದವರು ಪ್ರತಿಭಟನೆಯಲ್ಲಿದ್ದರು.
Leave a Comment