ಹಳಿಯಾಳ:-
ತಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ದಾಂಡೇಲಿ-ಹಳಿಯಾಳ ಕಾಳಿ ಏತನೀರಾವರಿ ಯೋಜನೆಗೆ ಬಜೆಟ್ನಲ್ಲಿ 200 ಕೋಟಿ ರೂ. ಮಂಜೂರಿ ಮಾಡಿದ್ದೇ ಆದರೇ ಬಳಿಕ ಬಂದ ಕಾಂಗ್ರೇಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಯೋಜನೆ ಅನುಷ್ಠಾನಗೊಳಿಸದೆ ಕ್ಷೇತ್ರದ ರೈತರಿಗೆ ಅನ್ಯಾಯ ಮಾಡಿದ್ದು ಅವರನ್ನು ಮನೆಗೆ ಕಳುಹಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಯೂರಪ್ಪ ಹಳಿಯಾಳ ಕ್ಷೇತ್ರದ ಜನತೆಗೆ ಕರೆ ನೀಡಿದರು. ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಹಳಿಯಾಳಕ್ಕೆ ಆಗಮಿಸಿ ಇಲ್ಲಿಯ ಶ್ರೀ ಶಿವಾಜಿ ಕ್ರೀಡಾಂಗಣದಲ್ಲಿ ಹಾಕಲಾದ ಭವ್ಯ ಬೃಹತ್ ವೇದಿಕೆಯಲ್ಲಿ ಪಂಡಿತ ದಿನದಯಾಳ್ ಉಪಾಧ್ಯಾಯ ಹೇಸರಿನ ವೇದಿಕೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಿದ್ದರು. ಈ ಹಿಂದೆ ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾತಿ ಭೇದ ಮರೆತು ಎಲ್ಲ ವರ್ಗಕ್ಕೆ ಸಮಾನ ನ್ಯಾಯ ಒದಗಿಸಿದ್ದೇ ಅಲ್ಲದೇ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲಾಗಿತ್ತು ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ನ್ಯಾಯ ಒದಗಿಸಲಾಗಿತ್ತು ಆದರೇ ತಮ್ಮ ಸರ್ಕಾರ ಕೈಗೊಂಡ ಈ ಯೋಜನೆಗಳನ್ನು ಈಗ ಸಿದ್ದರಾಮಯ್ಯ ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ದುರ್ದೈವದ ಸಂಗತಿ ಎಂದರು. ಈ ಹಿಂದಿನ ಯಾವುದೇ ನಾಯಕ ಮಾಡಿರದ ಸಾಧನೆಯನ್ನು, ಅಭಿವೃದ್ದಿಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದು ವಿಶ್ವದಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವ ಅವರು ರಸಗೊಬ್ಬರ ಹಾಗೂ ಯೂರಿಯಾ ರೈತರಿಗೆ ಕಡಿಮೆ ದರದಲ್ಲಿ ಹಾಗೂ ಉಚಿತವಾಗಿ ಸಿಗಲು ಕ್ರಾಂತಿಯೇ ಮಾಡಿದ್ದಾರೆ ಎಂದರು. ಇನ್ನೂ ಹಳಿಯಾಳದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಅವರನ್ನು ಮನೆಗೆ ಕಳುಹಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಿ ತಾವು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಕಾಳಿ ಏತನೀರಾವರಿ ಯೋಜನೆ, ಮರಾಠಾ ಜನಾಂಗಕ್ಕೆ 2ಎ ಪ್ರವರ್ಗಕ್ಕೆ ಸೇರ್ಪಡೆ, ಗೌಳಿ, ಕುಣಬಿ ಜನಾಂಗವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವುದು, ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು, ಅರಣ್ಯ ಭೂಮಿ ಅತಿಕ್ರಮಣ ಸಕ್ರಮ ಮಾಡಿ ಬಡವರಿಗೆ ಸೂರು ಒದಗಿಸುವುದು, ಜೋಯಿಡಾದಲ್ಲಿ ಕುಡಿಯುವ ನೀರು ಯೋಜನೆ ಸೇರಿದಂತೆ ಮುಂತಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿದರು. ಸಂಸದ ಹಾಗೂ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಪ್ರಹ್ಲಾದ ಜೋಶಿ ಮಾತನಾಡಿ ರಾಜ್ಯ ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇವರ ದುರಾಡಳಿತ ಕೊನೆಗಾಣಿಸಲು ಬಡವರಿಗೆ ಸಮರ್ಪಿತ ಸರ್ಕಾರದ ರಚನೆಗೆ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದ ಅವರು ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ ಆರ್.ವಿ.ದೇಶಪಾಂಡೆ ಅವರಿಗೆ ‘ರಾಯರು’ ಎಂದು ಸಂಬೊಧಿಸಿದ ಅವರು ಕೈಗಾರಿಕಾ ಸಚಿವರಾಗುವ ದೇಶಪಾಂಡೆ ಅವರು ಕ್ಷೇತ್ರದಲ್ಲಿ ಕೈಗಾರಿಕೊಧ್ಯಮ ಆರಂಭಿಸುವ ಬದಲು ಇದ್ದಂತಹ ಕೈಗಾರಿಕೆಯನ್ನು ಮುಚ್ಚಿರುವ ಕೀರ್ತಿ ಅವರಿಗಿದ್ದು ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಹಾಗೂ ಅವರ ಸಚಿವರು ಕರ್ನಾಟಕ ಲೂಟಿ ಮಾಡುವುದರಲ್ಲೆ ತೊಡಗಿದ್ದು ಈ ಭ್ರಷ್ಟ ಸರ್ಕಾರದ ಅಂತ್ಯ ಮಾಡಿ ಹೊಸ ಸರ್ಕಾರಕ್ಕೆ ಅವಕಾಶ ನೀಡಿ ಕೇಂದ್ರದಲ್ಲಿರುವ ಹಾಗೆ ರಾಜ್ಯದಲ್ಲೂ ಅಭಿವೃದ್ದಿಪರ ಹಾಗೂ ಜನಪರ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ದೇಶಪಾಂಡೆ ಅವರನ್ನು ಉಲ್ಲೇಖಿಸಿ ಮಾತನಾಡಿದ ಹೆಗಡೆ ಕ್ಷೇತ್ರದಲ್ಲಿ ರಾಯರ ಕಾಲ ಮುಗಿದಿದೆ ಇನ್ನೇನಿದ್ದರೂ ಅಣ್ಣಾವ್ರ ಕಾಲ ರಾಯರಿಗೆ ಹಳಿಯಾಳದ ರಾಜಕೀಯ ಅಖಾಡದಲ್ಲಿ ಕುಸ್ತಿ ಹಿಡಿಯಲು ಶಕ್ತರಲ್ಲಿ ಅವರ ಸೋಲು ಖಚಿತ ಎಂದು ಗೇಲಿ ಮಾಡಿದರು. ಶೋಭಾ ಕರಂದ್ಲಾಜೆ ಮಾತನಾಡಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಿಂದ ತುಘಲಕ್ ದರ್ಬಾರ್ ನಡೆದಿದ್ದು ಅಂಗನವಾಡಿಗಳಲ್ಲಿ ಮಾತೃಪೂರ್ಣ ಎಂಬ ಅವೈಜ್ಞಾನಿಕ ಯೋಜನೆ ಜಾರಿಗೆ ತಂದಿದ್ದು ಖಂಡನೀಯ ಎಂದ ಅವರು ಕೇಂದ್ರ ಸರ್ಕಾರ ರಾಜ್ಯಕ್ಕೆ 2 ಲಕ್ಷ 40 ಕೋಟಿ ರೂ. ಅನುದಾನ ನೀಡಿದ್ದರೂ ಸಹ ರಾಜ್ಯ ಸರ್ಕಾರ ಅಭಿವೃದ್ದಿ ಮಾಡುವಲ್ಲಿ ಅಸಡ್ಡೆ ತೊರಿಸುತ್ತಿದೆ ಎಂದು ಆಪಾದಿಸಿದ ಅವರು ಹಳಿಯಾಳ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿಲ್ಲ ಆದರೇ ಈ ಬಾರಿ ಬಿಜೆಪಿ ಗೆಲುವು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಶಾಸಕ ಹಾಗೂ ಇಂದಿನ ರ್ಯಾಲಿಯ ಪ್ರಮುಖ ರೂವಾರಿಯಾಗಿದ್ದ ಸುನೀಲ್ ಹೆಗಡೆ ಮಾತನಾಡಿ ಸಚಿವ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ ರಾಜ್ಯಾಧ್ಯಕ್ಷರು ಹಾಗೂ ಹೈಕಮಾಂಡ ಅನಂತಕುಮಾರ ಹೆಗಡೆ ಅವರಿಗೆ ಚುನಾವಣಾ ಉಸ್ತುವಾರಿ ನೀಡಬೇಕೆಂದು ಮನವಿ ಮಾಡಿದ ಅವರು ಈ ಹಿಂದೆ ತಾವು ಶಾಸಕರಿದ್ದಾಗ ಹಾಗೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕಾಳಿನದಿ ನೀರಾವರಿ ಯೋಜನೆ ಮಂಜೂರಾಗಿತ್ತು ಆ ಸಮಯದಲ್ಲಿ ಹಳಿಯಾಳಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಯೋಜನೆ ಮಂಜೂರಾಗಿದೆ ಎಂದು ಒಂದು ಮಾತು ಹೇಳಿದ್ದರೇ ಇಂದು ತಾನೇ ಶಾಸಕನಾಗಿರುತ್ತಿದ್ದೇ ಎಂದು ಬೇಸರದಿಂದ ನುಡಿದ ಸುನೀಲ್ ಹೆಗಡೆ ಭಾಷಣದುದ್ದಕ್ಕೂ ಆರ್.ವಿ.ದೇಶಪಾಂಡೆ ವಿರುದ್ದ ಟೀಕಾ ಪ್ರಹಾರ ನಡೆಸಿದರು. ಪಟ್ಟಣಕ್ಕೆ ಆಗಮಿಸಿದ ಪರಿವರ್ತನಾ ರ್ಯಾಲಿಯನ್ನು ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ತಾಲೂಕಾಧ್ಯಕ್ಷರುಗಳು ಸ್ವಾಗತಿಸಿದರು. ರ್ಯಾಲಿಯಲ್ಲಿ ಸುಮಾರು 18ಸಾವಿರಕ್ಕೂ ಅಧಿಕ ಜನ ಸೇರಿದ್ದು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ವೇದಿಕೆಯ ಮೇಲೆ ಶಾಸಕ ಅಶ್ವಥ್ ನಾರಾಯಣ, ಮಾಜಿ ಸಚಿವ ಸಿ.ಎಮ್ ಉದಾಸಿ, ಮಾಜಿ ಶಾಸಕ ವಿಎಸ್ ಪಾಟೀಲ್, ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಜಿಲ್ಲಾಧ್ಯಕ್ಷ ಕೆಜಿ ನಾಯ್ಕ, ಪಕ್ಷದ ರಾಜ್ಯ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ರವಿಕುಮಾರ, ವಿ ರಾಮರಾವ, ಜಿಲ್ಲಾ ಮುಖಂರಾದ ರೂಪಾಲಿ ನಾಯ್ಕ, ರೇಖಾ ಹೆಗಡೆ, ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ದಾಂಡೇಲಿ ತಾಲೂಕಾಧ್ಯಕ್ಷ ಬಸವರಾಜ ಕಳಸೆಟ್ಟಿ, ತುಕಾರಾಮ ಮಾಂಜ್ರೇಕರ, ಮುಖಂಡರಾದ ಮಂಗೇಶ ದೇಶಪಾಂಡೆ, ಎಸ್.ಎ.ಶೇಟವಣ್ಣವರ ಇದ್ದರು.
Leave a Comment