ಕಾರವಾರ:
ವಿವಿಧ ಬೃಹತ್ ಯೋಜನೆಗಳಿಂದ ಕಾರವಾರ-ಅಂಕೋಲಾ ಪ್ರದೇಶದ ಜನ ನಿರಾಶ್ರಿತರಾಗಿದ್ದು, ನಿರಾಶ್ರಿತರ ಹೋರಾಟಕ್ಕೆ ಶಿರಸಿಯ ಸ್ವರ್ಣವಲ್ಲಿ ಮಠ ಬೆಂಬಲ ನೀಡಿದೆ.
ಕಾರವಾರ – ಅಂಕೋಲಾ ಭಾಗದಲ್ಲಿ ಸೀಬರ್ಡ ನೌಕಾನೆಲೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಕೊಂಕಣ ರೈಲ್ವೇ ಸೇರಿದಂತೆ ಹಲವು ಯೋಜನೆಗಳಿಂದ ಜನ ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರು ತಮಗೆ ಸಲ್ಲಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದು, ಈ ಹಿಂದೆ ನಡೆದ ಮೂರು ಹೋರಾಟಗಳಲ್ಲಿ ಸ್ವರ್ಣವಲ್ಲಿ ಮಠ ಭಾಗಿಯಾಗಿತ್ತು. ಭವಿಷ್ಯದಲ್ಲಿ ನಡೆಯುವ ಸಂಘಟಿತ ಹೋರಾಟಗಳಿಗೂ ಮಠ ಬೆಂಬಲ ನೀಡಲಿದೆ ಎಂದು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸಾಮೀಜಿ ಹೇಳಿದರು.
ಅಮದಳ್ಳಿಯಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟವು ಹಮ್ಮಿಕೊಂಡ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಸಾಧನಾ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು. ಒಂದೆಡೆ ಸಮುದ್ರ, ಇನ್ನೊಂದೆಡೆ ಗುಡ್ಡಗಾಡು ಪ್ರದೇಶವಾದ ಇಲ್ಲಿ ಇರುವ ಅಲ್ಪಸ್ವಲ್ಪ ಭೂಪ್ರದೇಶದಲ್ಲಿಯೇ ಜನರು ಜೀವನ ಸಾಗಿಸುತ್ತಾರೆ. ಅದರಲ್ಲಿಯೂ ಈ ಯೋಜನೆಗಳು ಬಂದು ಎಲ್ಲರೂ ಕಷ್ಟ ಪಡುವಂತಾಗಿದೆ. ಸಂಘಟಿತ ಹೋರಾಟದಿಂದ ಜಯ ಸಾದ್ಯವಿದೆ ಎಂದವರು ಹೇಳಿದರು.
ಎಲ್ಲರ ಮನೆಯಲ್ಲಿಯೂ ಭಗವದ್ಗೀತೆ ಇರಬೇಕು. ಎಲ್ಲರೂ ಅದನ್ನು ಓದಬೇಕು. ವಿಶ್ವದ ಎಲ್ಲ ಭಾಷೆಗಳಲ್ಲಿ ಇರುವ ಅತೀ ಹೆಚ್ಚು ಆವೃತಿಗಳನ್ನು ಹೊಂದಿರುವ ಏಕೈಕ ಗೃಂಥ ಅದು ಭಗವದ್ಗೀತೆಯಾಗಿದೆ. ಅದನ್ನು ನಮ್ಮ ಜನರೇ ಓದಿಲ್ಲ ಅಂತೆಂದರೆ ಅದು ಅನ್ಯಾಯ ಎಂದು ಹೇಳಿದರು. ಪ್ರತಿ ವರ್ಷ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಧಾರ್ಮಿಕ ಭಾವನೆಗಳ ಮೂಲಕ ಸಂಘಟನೆ ಮಾಡಿದೆ ಎಂದರು. ದೇವರ ಚಿಂತನೆಯಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚೆಚ್ಚು ಪ್ರಯೋಜನ ಲಭಿಸುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಸಂಶೋಧನೆಯೊಂದರ ವರದಿಯ ಪ್ರಕಾರ ಇನ್ನಿತರೆ ಕೆಲಸವನ್ನು ಮಾಡುವಾಗ ಮನುಷ್ಯನ ದೇಹದ 40 ನಾಡಿಗಳು ಕ್ರಿಯಾಶೀಲವಾಗಿರುತ್ತದೆ. ಆದರೆ ದೇವರ ಸ್ಮರಣೆಯ ವೇಳೆ ಕೇವಲ 9 ನಾಡಿಗಳು ಕ್ರಿಯೆಯಲ್ಲಿದ್ದು, ಉಳಿದೆಲ್ಲವೂ ವಿಶ್ರಾಂತಿ ಪಡೆಯುತ್ತಿರುತ್ತದೆ. ಎಲ್ಲರನ್ನು ಗೌರವಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಳಿಗ್ಗೆ ಶ್ರೀಸತ್ಯನಾರಾಯಣ ಪೂಜೆ, ಸಾಧನಾ ಸಮಾವೇಶ ಹಾಗೂ ಸಭಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆಯ ಬಳಿಕ ಸ್ಥಳೀಯ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿದವು. ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಗಂಗಾಧರ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಮದಳ್ಳಿ ವಲಯ ಮೇಳ್ವಿಚಾರಕ ಸಂದೀಪ ನಾಯ್ಕ, ಶ್ರೀವೀರಗಣಪತಿ ಸಂಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ರವೀಂದ್ರ ಅಮದಳ್ಳಿ ಇತರರಿದ್ದರು
Leave a Comment