ಕಾರವಾರ:
ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ತಮ್ಮ ಜ್ನಾನವನ್ನು ವೃದ್ಧಿಸಿಕೊಳ್ಳಬೇಕು. ಪುಸ್ತಕಗಳು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲದು ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ. ಎಚ್. ನಾಯಕ ಅಭಿಪ್ರಾಯ ಪಟ್ಟರು.
ಅವರು ದಿವೇಕರ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಆಯೋಜಿಸಿರುವ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ”ದ ಅಂಗವಾಗಿ ನವಂಬರ 14 ರಿಂದ 20 ರವರೆಗೆ ಏರ್ಪಡಿಸಿದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಂಥಾಲಯವು ಗಣಕೀಕೃತಗೊಂಡಿದ್ದು ಜೊತೆಗೆ ವಿದ್ಯುನ್ಮಾನ-ನಿಯತಕಾಲಿಕೆಗಳು, ವಿದ್ಯುನ್ಮಾನಪುಸ್ತಕಗಳು ಭವಿಷ್ಯತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗುತ್ತವೆ ಎಂದು ಅವರು ಹೇಳಿದರು. ಇಂದಿನ ಜಾಗತಿಕ ಬದಲಾವಣೆ ಜೊತೆಗೆ ಗ್ರಂಥಾಲಯದಲ್ಲಿ ಬದಲಾಗುತ್ತಿರುವ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಗ್ರಂಥಪಾಲಕರಾದ ಶ್ರೀ ಸುರೇಶ ಬಿ ಗುಡಿಮನಿಯವರು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಗ್ರಂಥಾಲಯದಲ್ಲಿ ಲಭ್ಯವಿದ್ದ ಪುಸ್ತಕ, ನಿಯತಕಾಲಿಕೆ, ವಿದ್ಯುನ್ಮಾನ ನಿಯತಕಾಲಿಕೆ, ವಿಶ್ವಕೋಶ, ಶಬ್ದಕೋಶ ಇವುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಡಾ. ಕೇಶವ ಕೆ. ಜಿ., ಪಿ.ಯು. ಕಾಲೇಜಿನ ಪ್ರಾಚಾರ್ಯ ರೂಪಾ ಬಾಂದೇಕರ ಶ್ರೀ. ಜಿ. ಎಚ್ ಚಾರೋಡಿ ಹಾಗೂ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Leave a Comment