ಕಾರವಾರ:
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ ವಿರೋಧಿಸಿ ವೈದ್ಯರು ಮುಷ್ಕರ ಹೂಡಿರುವ ವೇಳೆಯಲ್ಲಿಯೇ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿ ಪಿಕಳೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ ಪಿಕಳೆ ಎರಡು ಜೀವಗಳನ್ನು ಉಳಿಸಿದರು.
ಇತರೆ ವೈದ್ಯರಂತೆ ಡಾ. ಸಂಜೀವ ಪಿಕಳೆ ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಬಗ್ಗೆ ವೀಣಾ ಎಂಬಾತರನ್ನು ಆಸ್ಪತ್ರೆಗೆ ಕರೆತಂದಿರುವ ವಿಷಯ ವೈದ್ಯರಿಗೆ ತಿಳಿಯಿತು. ಗಂಭೀರ ಪರಿಸ್ಥಿತಿಯನ್ನು ಅರಿತ ಅವರು ಕೂಡಲೇ ಆಸ್ಪತ್ರೆಗೆ ತೆರಳಿ ಗರ್ಭಿಣಿ ಆರೈಕೆ ಮಾಡಿದರು. ಮಹಿಳೆಯ ಗರ್ಭದಲ್ಲಿ ಆಮ್ನಿಯೋಟಿಕ್ ದ್ರವ ಕಡಿಮೆಯಾಗಿರುವದನ್ನು ಮನಗಂಡು ಕೂಡಲೇ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗುವಿನ ಜೀವ ಕಾಪಾಡಿದರು. ವೀಣಾರಿಗೆ ಗಂಡು ಮಗು ಜನಿಸಿತು. ಕಾಯ್ದೆ ಕಾನೂನುಗಳಿಗಿಂತ ಜೀವ ಉಳಿಸುವದು ಮುಖ್ಯ. ಹೆರಿಗೆ ಮಾಡಿಸದಿದ್ದರೆ ಮಗು ಬದುಕುತ್ತಿರಲಿಲ್ಲ. ತಾಯಿ ಕೂಡ ತೊಂದರೆ ಅನುಭವಿಸಬೇಕಿತ್ತು. ಹೀಗಾಗಿ ಕರ್ತವ್ಯದಲ್ಲಿರದಿದ್ದರೂ ಅನಿವಾರ್ಯವಾಗಿ ಕರ್ತವ್ಯ ನಿಭಾಯಿಸಬೇಕಾಯಿತು ಎಂದು ಸಂಜೀವ ಪಿಕಳೆ ಹೇಳಿದರು. ತಮ್ಮ ಪತ್ನಿ ಹಾಗೂ ಮಗುವಿನ ಜೀವ ಉಳಿಸಿದಕ್ಕಾಗಿ ವೀಣಾ ಪತಿ ಪ್ರಕಾಶ ಅಂಕೋಲೆಕರ್ ಕೃತಜ್ಞತೆ ಸಲ್ಲಿಸಿದರು.
Leave a Comment