ಕಾರವಾರ: ಕಳೆದ ಎರಡು ದಿನದಿಂದ ಕೆಪಿಎಂಇ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ನಡೆಸುತ್ತಿರುವ ಮುಷ್ಕರಕ್ಕೆ ಜಿಲ್ಲೆಯ ಖಾಸಗಿ ವೈದ್ಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುರುವಾರದಿಂದ ಹೊರರೋಗಿಗಳಿಗೆ ನೀಡುತ್ತಿದ್ದ ಚಿಕಿತ್ಸೆ ಹಾಗೂ ದಾಖಲಾತಿಯನ್ನು ಸ್ಥಗಿತಗೊಳಿಸಿದ್ದಾರೆ.
ಕಳೆದ ಸುಮಾರು ಒಂದು ವಾರದಿಂದ ಕೆಪಿಎಂಇ ತಿದ್ದುಪಡಿಗೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರಿಂದ ವಿರೋಧ ವ್ಯಕ್ತಪಡಿಸಲಾಗಿತ್ತಾದರು ಸೇವೆಯನ್ನು ಸ್ಥಗೀತಗೊಳಿಸಿರಲಿಲ್ಲ. ಆದರೆ ಇದೀಗ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಗಳ ಗೇಟ್ಗಳಿಗೆ ಬೀಗ ಹಾಕಿದ್ದು, 534 ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆಯನ್ನು ಸ್ಥಗೀತಗೊಳಿಸಿವೆ. ಇದರಿಂದ ದೂರದ ಊರುಗಳಿಂದ ಚಿಕಿತ್ಸೆಗೆ ಬರುತ್ತಿರುವ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸರಕಾರ ಕೆಪಿಎಂ ಕಾಯ್ದೆಯನ್ನು ಜಾರಿಗೆ ತರುತ್ತಿರುವುರುದು ತಪ್ಪು ನಿರ್ಧಾರ. ನಾವು ಮುಷ್ಕರ ಮಾಡುತ್ತಿರುವುದು ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲ. ಸರಕಾರ ವೈದ್ಯಕೀಯ ವೃತ್ತಿಯನ್ನೆ ಮುಗಿಸಲು ಹೊರಟಿದೆ. ಇದರಿಂದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆಕೊಟ್ಟಂತೆ ಜಿಲ್ಲೆಯಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಮುಷ್ಕರ ಹೂಡಲಾಗಿದೆ ಎಂದು ಇಲ್ಲಿನ ಪಿಕಳೆ ನರ್ಸಿಂಗ್ ಹೋಂನ ವೈದ್ಯ ಡಾ.ನಿತಿನ್ ಪಿಕಳೆ ತಿಳಿಸಿದರು. ಆಸ್ಪತ್ರೆಯಲ್ಲಿ ಹೊರರೋಗಿಗಳ ಚಿಕಿತ್ಸೆ ಹಾಗೂ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕೆಲವರು ನಮ್ಮ ಖಾಯಂ ರೋಗಿಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿಡುವುದು ನಮ್ಮ ಧರ್ಮವಾಗಿರುವುದರಿಂದ ಅದನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಪ್ರತಿಭಟನೆಗೆ ಜನರು ಕೂಡ ಸಹಕಾರ ನೀಡಬೇಕು. ಸರಕಾರ ಈ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವ ಮೂಲಕ ವೈದ್ಯಕೀಯ ವೃತ್ತಿಯನ್ನೇ ಕೊಲ್ಲಲು ತೀರ್ಮಾನಿಸಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ವೈದ್ಯಕೀಯ ವೃತ್ತಿ ಇತರೆ ಉದ್ಯೋಗದಂತಲ್ಲ. ಹೀಗಾಗಿ ಇಲ್ಲಿನ ಸೇವೆಗೆ ದರವನ್ನು ನಿಗದಿ ಮಾಡುವುದು ಸರಿಯಲ್ಲ. ಹಣಕ್ಕೆ ತಕ್ಕಂತೆ ರೋಗಿಗೆ ಚಿಕಿತ್ಸೆ ನೀಡಲಾಗುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನವಿಲ್ಲದೇ, ಜನರಿಗೆ ತೊಂದರೆ ನೀಡಲು ಈ ಮಸೂದೆಯನ್ನು ತರುತ್ತಿದ್ದಾರೆ. ನಮ್ಮ ಮೇಲೆ ಕತ್ತಿ ಮಸೆದು ಯಾರನ್ನೋ ಕೊಲ್ಲುವಂತಾಗಿದೆ. ಸಾರ್ವಜನಿಕರು ಈ ಪ್ರತಿಭಟನೆಯನ್ನು ಅನ್ಯತಾ ಭಾವಿಸಬಾರದು. ತುರ್ತು ಚಿಕಿತ್ಸೆ ಖಂಡಿತ ಇದೆ ಎಂದು ತಿಳಿಸಿದರು.
ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಇದೀಗ ಜಿಲ್ಲೆಯ ಜನರ ಮೇಲು ವಿಪರಿತ ಪರಿಣಾಮ ಬಿರುತಿದೆ. ಇದು ಹೀಗೆ ಮುಂದುವರೆದಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಆತಂಕ ಜನರನ್ನು ಕಾಡತೊಡಗಿದೆ.ಜಿಲ್ಲೆಯಾದ್ಯಂತ ಖಾಸಗಿ ವೈದ್ಯರು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹಾಗೂ ನರ್ಸಿಂಗ್ ಹೊಂಗಳು ಬಂದ್ ಆಗಿದ್ದು, ಸಾರ್ವಜನಿಕರು ಅನಿವಾರ್ಯವಾಗಿ ಸರಕಾರಿ ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ. ಇದರಿಂದ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜನಂಸಂದಣಿಯಿಂದ ಕೂಡಿರುವುದು ತಿಳಿದುಬಂದಿದೆ. ಅಲ್ಲದೆ ಗುರುವಾರ ಇಲ್ಲಿನ ಜಿಲ್ಲಾಸ್ಪತ್ರೆಯ ಎಲ್ಲ ವಿಭಾಗದಲ್ಲಿಯೂ ಜನ ತುಂಬಿದ್ದರು. ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದ ಜನರು ಸಂಜೆಯವರೆಗೂ ಕಾದು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಕಂಡುಬಂತು.
Leave a Comment