.ಕಾರವಾರ: ಅಣು ವಿಕಿರಣ ಸೋರಿಕೆ ಅವಘಡದಲ್ಲಿ ಎದುರಿಸಬೇಕಾಗುವ ತುರ್ತು ಸನ್ನಿವೇಶಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ ಕೈಗಾ ಎನ್ಪಿಸಿಎಲ್ನಲ್ಲಿ ನಡೆಯಲಿದೆ. ಅಣಕು ಪ್ರದರ್ಶನದ ರೂಪರೇಷೆಗಳ ಕುರಿತು ಶುಕ್ರವಾರ ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಾನಿಕ ಪ್ರಭಾರ ನಿರ್ದೇಶಕ ಸಂಜಯ್ಕುಮಾರ್ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದರು. ಪರಮಾಣು ವಿದ್ಯುತ್ ಸ್ಥಾವರ ಅತ್ಯಂತ ಸುರಕ್ಷೆ ಹಾಗೂ ಪರಿಸರ ಪ್ರೇಮಿಯಾಗಿದ್ದು ಯಾವುದೇ ಆತಂಕಕ್ಕೆ ಅವಕಾಶ ಇರುವುದಿಲ್ಲ. ಆದರೂ ಪರಮಾಣು ವಿದ್ಯುತ್ ನಿಯಂತ್ರಣ ಮಂಡಳಿ ಮಾರ್ಗಸೂಚಿಯಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಬೇಕಿರುವುದರಿಂದ ನವೆಂಬರ್ 18ರಂದು ಶನಿವಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಪ್ರತಿಮೂರು ತಿಂಗಳಿಗೊಮ್ಮೆ ಪ್ಲಾಂಟ್ನಲ್ಲಿ ಹಾಗೂ ಪ್ರತಿ ಆರು ತಿಂಗಳಿಗೊಮ್ಮೆ ವಿದ್ಯುತ್ ಸ್ಥಾವರದ ಒಳಭಾಗದಲ್ಲಿ ಇಂತಹ ಪ್ರಕ್ರಿಯೆ ನಡೆಸಬೇಕಿದೆ. ಸ್ಥಾವರದ ಎಲ್ಲ ಘಟಕಗಳು, ವ್ಯವಸ್ಥೆಗಳು ಸುಸ್ಥಿತಿಯಲ್ಲಿವೆ ಎಂಬುದನ್ನು ಖಾತರಿಸಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಂತೆಯೇ ನ.18ರಂದು ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪ್ರದರ್ಶನದಲ್ಲಿ ಜಿಲ್ಲಾಡಳಿತ ಅವಘಡ ಸಂದರ್ಭದಲ್ಲಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಗಮನಿಸುತ್ತದೆ ಎಂದರು. ನ.18ರಂದು ಮುಂಜಾನೆಯಿಂದ ಅಣಕು ಪ್ರದರ್ಶನದ ಕಾರ್ಯಾಚರಣೆ ಆರಂಭವಾಗಲಿದ್ದು ಮಧ್ಯಾಹ್ನ 12.30ಕ್ಕೆ ಪೂರ್ಣಗೊಳ್ಳಲಿದೆ. ಮುಂಜಾನೆ ಸ್ಥಾವರದಲ್ಲಿ ಅಣು ಸೋರುವಿಕೆಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು. ಈ ಹಂತದಲ್ಲಿ ಜಿಲ್ಲಾಧಿಕಾರಿಗಳು ತುರ್ತು ಕಾರ್ಯಾಚರಣೆಯನ್ನು ಘೋಷಿಸುವರು. ಈ ಹಂತದಲ್ಲಿ ಸೆಕ್ಟರ್ 4ರ ವ್ಯಾಪ್ತಿಯಲ್ಲಿ ಬರುವ ಕುಚೇಗಾರ ಗ್ರಾಮದ ಸಾರ್ವಜನಿಕರನ್ನು ಕೇರವಾಡಿ ಸರ್ಕಾರಿ ಪ್ರೌಢಶಾಲೆಗೆ ಸ್ಥಳಾಂತರಿಸಲಾಗುವುದು. ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಣಕು ತುರ್ತು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಣು ಸ್ಥಾವರದ ಅಧಿಕಾರಿಗಳಾದ ಜೆ.ಆರ್.ದೇಶಪಾಂಡೆ, ಪಿ.ಜಿ.ರಾಯಚೂರು, ಸುಬ್ರಮಣ್ಯ, ಮತ್ತಿತರರು ಉಪಸ್ಥಿತರಿದ್ದರು.
Leave a Comment