ಕಾರವಾರ: ಅರ್ಜುನ್ ಚಿತ್ರ ಮಂದಿರದಲ್ಲಿ ಶುಕ್ರವಾರದಿಂದ ವಾರ್ತಾ ಇಲಾಖೆ ಸಹಯೋಗದಲ್ಲಿ ಚಲನ ಚಿತ್ರ ಸಪ್ತಾಹ ಆರಂಭವಾಗಿದ್ದು, ಇದನ್ನು ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಿ.ರಮೇಶಬಾಬು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪೌರ ಕಾರ್ಮಿಕರ ಜೀವನದಾರಿತ ಅಮರಾವತಿ ಕನ್ನಡ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸುತ್ತಿರುವದು ಪೌರಕಾರ್ಮಿಕರ ಸಮಸ್ಯೆಗಳೇನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರವಾರ ನಗರಸಭೆ ಪೌರಾಯುಕ್ತ ಎಸ್.ಯೊಗೇಶ್ವರ ಮಾತನಾಡಿ ಕಾರವಾರದ ನಾಲ್ಕು ಜನ ಪೌರಕಾರ್ಮಿಕರು ವಿದೇಶಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಪೌರಕಾರ್ಮಿಕರ ಕುರಿತ ಚಿತ್ರ ಪ್ರದರ್ಶಿಸುತ್ತಿರುವದು ಸಂತೋಷಕರ ಸಂಗತಿ. ಒಂದು ವಾರದವರೆಗೆ ಉಚಿತವಾಗಿ ಪ್ರದರ್ಶನಗೊಳ್ಳುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ವೀಕ್ಷಿಸುವ ಸುವರ್ಣಾವಕಾಶವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಅಮರಾವತಿ ಕನ್ನಡ ಚಲನಚಿತ್ರದ ಸಹಾಯಕ ನಿರ್ದೇಶಕ ಶಾಮ ಸುಂದರ ಮಾತನಾಡಿ ಸೀನಿಮಾ ಅಭಿವ್ಯಕ್ತಿ ಹೊರಹಾಕುವ ಒಂದು ಮಾದ್ಯಮವಾಗಿದೆ. ಒಂದು ನಗರ ಸುಂದರ ಕಾಣಲು ಅಲ್ಲಿ ಪೌರಕಾರ್ಮಿಕರ ಶ್ರಮವಿರುತ್ತದೆ. ಪೌರಕಾರ್ಮಿಕರ ಕುರಿತ ಅಮರಾವತಿ ಚಿತ್ರವನ್ನು ನೋಡುವ ಅವಕಾಶವನ್ನು ನಗರದ ಜನತೆ ಪಡೆದುಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಕಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು. ಜಿ. ಮಾತನಾಡಿ, ಪ್ರಶಸ್ತಿ ವಿಜೇತ ಚಲನಚಿತ್ರಗಳಾದ ಕಿರಿಕ್ ಪಾರ್ಟಿ, ರಾಮ ರಾಮ ರೇ, ಮದಿಪು(ತುಳು) ಯೂ ಟರ್ನ, ಅಲ್ಲಮ, ಮಾರಿಕೊಂಡವರು ಚಿತ್ರಗಳನ್ನು ವೀಕ್ಷಿಸಲು ಚಿತ್ರೋತ್ಸವ ಸಪ್ತಾಹ ಉತ್ತಮ ಅವಕಾಶವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.
Leave a Comment