ಕಾರವಾರ: ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕಕರಿಗೆ ಮೀಸಲಾತಿಯನ್ನ ಮುಂದುವರೆಸುವಂತೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸ್ಥಳದಲ್ಲಿ ರಾಜ್ಯ ಸಂಘಟನೆ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ನೀಡುತ್ತಿರುವ ಮೀಸಲಾತಿಯನ್ನ ತೆಗೆಯುವಂತೆ ಜೊತೆಗೆ ಈ ವರೆಗೆ ನೀಡಿರುವ ಬಡ್ತಿ ಮೀಸಲಾತಿ ಸೌಲಭ್ಯವನ್ನ ಹಿಂಪಪಡೆದು ಹೊಸದಾಗಿ ಜೇಷ್ಠತಾ ಪಟ್ಟಿ ಸಿದ್ದಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ನ್ಯಾಯಲಯದ ಆದೇಶ ನಿಜಕ್ಕೂ ದಲಿತ ಸಮುದಾಯದ ನೌಕರರಿಗೆ ಮಾರಕವಾಗಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಸಂಘ ಒಳಗೊಂಡು ರಾಜ್ಯದ 30 ಜಿಲ್ಲೆಯ ಸಾವಿರಾರು ನೌಕರರು ಅಧಿವೇಶನ ನಡೆಯುವ ಸುವರ್ಣ ಸೌಧದ ಸಮೀಪ ಪ್ರತಿಭಟನೆ ನಡೆಸಿತು.
ಸಮಾಜದಲ್ಲಿ ಜಾತಿ ವ್ಯವಸ್ಥೆಯ ಕೂಪದಿಂದ ಹೊರ ಬಂದು ಈಗಷ್ಟೇ ಮುಂದುವರೆಯುತ್ತಿರುವ ದಲಿತ ಸಮುದಾಯದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿಯಿಂದ ಉನ್ನತ ಹುದ್ದೆಗಳು ಸಿಗುವ ಮೂಲಕ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಲು ಅನುಕೂಲ ವಾಗಿತ್ತು. ಆದರೆ ನ್ಯಾಯಲಯದ ಆದೇಶ ದಲಿತ ಸಮುದಾಯಗಳಿಗೆ ಪೆಟ್ಟು ನೀಡಲಿದೆ. ಸರ್ಕಾರ ಈಗಾಗಲೇ ಅಧಿವೇಶನದಲ್ಲಿ ವಿಧಾನ ಸಭೆಯಲ್ಲಿ ಬಡ್ತಿ ಮೀಸಲಾತಿ ಮಸೂದೆಯನ್ನ ಮಂಡಿಸಿದ್ದು ವಿದೇಯಕವನ್ನ ಜಾರಿಗೆ ತರುವ ಮೂಲಕ ನ್ಯಾಯ ಒದಗಿಸುವಂತೆ ನೌಕರರು ಸಚಿವರಿಗೆ ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ನೌಕರರಿಗೂ ಬಡ್ತಿಯಲ್ಲಿ ಮೀಸಲಾತಿ ಒದಗಿಸುವಂತೆ ಸಚಿವರಿಗೆ ಒತ್ತಾಯಿಸಲಾಯಿತು. ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಸಚಿವರು ದಲಿತ ನೌಕರರಿಗೆ ಬಡ್ತಿಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳುವುದಾಗಿ ಹಾಗೂ ಮಸೂದೆ ಜಾರಿಗೆ ತರುವಂತೆ ಕ್ರಮ ಕೈಗೊಳ್ಳುತ್ತೇವೆಂದು ಆಶ್ವಾಸನೆ ನೀಡಿದರು. ಈ ಸಂಧರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಪ್ರೋ ಕಮಾನಿ, ಶಂಕರ್ ತುಮಕೂರು, ಉತ್ತರ ಕನ್ನಡ ಒಕ್ಕೂಟದ ಜಿಲ್ಲಾಧ್ಯಕ್ಷ ಜಿಡಿ ಮನೋಜೆ, ಜಗದೀಶ್ ಓಲೇಕಾರ್, ಉಮೇಶ್ ದೊಡ್ಡಮನಿ, ಪ್ರಕಾಶ್ ಚೌಹಾಣ್, ಸುಬ್ರಹ್ಮಣ್ಯ ಶೇರುಗಾರ್, ಬಿ ಕೃಷ್ಣ, ಸೋಮೆಶ್ ಪೂಜಾರ್, ಭೀಮಾ ಶಂಕರ್ ಹರಿಜನ್, ಶ್ರೀಮಂತ್ ಮದರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Comment