ಹಳಿಯಾಳ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳಿಯಾಳ ಶಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಹಳಿಯಾಳದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಕಟ್ಟಡ ದಾನಿ ಉಮೇಶ ಗಣಪತಿ ಗಿರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಪುಸ್ತಕಗಳನ್ನು ಓದುವ ಹವ್ಯಾಸ ಇಂದಿನ ಯುವ ಜನಾಂಗ ಬೆಳೆಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಪ್ರೋ. ಕೆ.ಎನ್. ತಿಗಡಿ ಗ್ರಂಥಾಲಯದಲ್ಲಿ ಐಎಎಸ್, ಐಎಫ್ಎಸ್, ಕೆಎಎಸ್ ಪುಸ್ತಕಗಳನ್ನು ಲಭ್ಯವಿದ್ದು ಅದರ ಉಪಯೋಗ ಪಡೆದುಕೊಳ್ಳಲು ಓದುಗರಿಗೆ ಕರೆ ನೀಡಿದರು.ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಇತಿಹಾಸ ಉಪನ್ಯಾಸಕ ಎಸ್.ಜಿ. ಕಡೇಮನಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ರವರ ಬಗ್ಗೆ ಸಮಗ್ರ ಇತಿಹಾಸವನ್ನು ವಿವರಿಸಿ ಗ್ರಂಥಾಲಯಕ್ಕೆ ನೀಡಿದ ಕೃತಿಗಳು, ಕೊಡುಗೆಗಳ ಕುರಿತು ತಿಳಿಸಿದರು. ನಿವೃತ್ತ ಹೆಸ್ಕಾಂ ಅಧಿಕಾರಿ ಎ.ಎನ್. ಕಣಿಮೆಹಳ್ಳಿ, ಕೆಪಿಸಿ ನಿವೃತ್ತ ಲೆಕ್ಕಾಧಿಕಾರಿ ಬಸವರಾಜ ಉಪ್ಪಿನ, ಅಜ್ಜಪ್ಪಾ ಪಟ್ಟಣಶೆಟ್ಟಿ, ಜಯರಾಮ ಗಿರಿ, ಎಂ.ಎಚ್. ಮಂಜುನಾಥ ವೇದಿಕೆಯಲ್ಲಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಾಲಯ ಸಹಾಯಕ ನಾಗರಾಜ.ಬಿ. ಚಲವಾದಿ ಸ್ವಾಗತಿಸಿದರು. ಭೀಮಾ ಶಂಕರ ಹರಿಜನ ನಿರೂಪಿಸಿದರು. ವಿಠ್ಠಲ ಮರಾಠೆ ವಂದಿಸಿದರು. ವಿವಿಧ ಗ್ರಾಮ ಪಂಚಾಯತಗಳ ಗ್ರಂಥಾಲಕ ಮೇಲ್ವಿಚಾರಕರು ಉಪಸ್ಥಿತರಿದ್ದರು.
Leave a Comment