ಕಾರವಾರ:
ಬಾಡದಲ್ಲಿರುವ ಗುರುಮಠದ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಬಳಿಕ ಉರಗ ತಜ್ಞ ಸಹಾಯದೊಂದಿಗೆ ಅದನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಯಿತು.
ಗುರುಮಠದ ಹತ್ತಿರ ಇರುವ ಮಹೇಶ ನಾರಾಯಣ ನಾಯ್ಕರ ಮನೆಯ ಎದುರಿನ ಕಂಪೌಂಡ್ ಒಳಗೆ ಸುಮಾರು 14 ಅಡಿ ಉದ್ದ ಹಾಗೂ 80 ಕೆ.ಜಿ. ತೂಕದ ಬೃಹತ್ ಹೆಬ್ಬಾವು ಬೇಟೆಯನ್ನು ಹುಡುಕಿ ಬಂದಿತ್ತು. ಇದನ್ನು ಕಂಡ ತಕ್ಷಣ ಸ್ಥಳೀಯರು ಉರಗ ತಜ್ಞ ಸದಾಶಿವಗಡದ ಮುರಾದ್ ಖಾನ್ ಅವರಿಗೆ ವಿಷಯ ತಿಳಿಸಿದರು. ನಡುರಾತ್ರಿಯ ವೇಳೆ ಸ್ಥಳಕ್ಕೆ ಬಂದ ಮುರಾದ್ ಬೃಹತ್ ಹೆಬ್ಬಾವನ್ನು ಹಿಡಿದರು. ಈ ಹೆಬ್ಬಾವಿನ ವಿಷಯದಿಂದ ಮಧ್ಯರಾತ್ರಿಯಾದರೂ ನಿದ್ದೆಗೆಟ್ಟು ಕಾಯುತ್ತಿದ್ದ ಸ್ಥಳೀಯರು ಆತಂಕ ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಬೃಹತ್ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಮುರಾದ್ ಬಳಿಕ ಮಾತನಾಡಿ ತಾನು ಅನೇಕ ವರ್ಷಗಳಿಂದ ವಿವಿಧ ರೀತಿಯ ಹಾವುಗಳನ್ನು ಸೆರೆ ಹಿಡಿದಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಗಾತ್ರದ ಹಾಗೂ ಅಧಿಕ ಭಾರದ ಹೆಬ್ಬಾವನ್ನು ಸೆರೆ ಹಿಡಿದಿದ್ದೇನೆ. ಸಾಮಾನ್ಯವಾಗಿ ನಾಯಿ, ಕುರಿ ಮುಂತಾದ ಪ್ರಾಣಿಗಳನ್ನು ಸರಾಗವಾಗಿ ನುಂಗುವ ಈ ಹೆಬ್ಬಾವು ಮನುಷ್ಯನನ್ನು ಸಲೀಸಾಗಿ ನುಂಗಬಹುದು ಎಂದು ಮಾಹಿತಿ ನೀಡಿದರು. ಈ ಹೆಬ್ಬಾವನ್ನು ಸೆರೆ ಹಿಡಿಯಲು ಸ್ಥಳೀಯರಾದ ಸುದೇಶ ನಾಯ್ಕ, ಮಹೇಶ ನಾಯ್ಕ, ಅಮರ ಶೆಟ್ಟಿ, ರಾಮದಾಸ ನೇತಲಕರ, ವಾಸುದೇವ ಕೋಲ್ವೇಕರ, ವಿನೋದ ನಾಯ್ಕ ಮುಂತಾದವರು ಸಹಕಾರ ನೀಡಿದರು.
ಪ್ರಾಣಿ ಪಕ್ಷಿಗಳಿಗೆ ಹಿಂಸೆ ನೀಡಿದರೆ ಅಥವಾ ಜೀವಹಾನಿಯನ್ನುಂಟು ಮಾಡಿದರೆ ಅರಣ್ಯ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲು ಕಾನೂನು ಇದೆ. ಇಂತಹ ಹೆಬ್ಬಾವು ಸೇರಿದಂತೆ ಇತರ ವಿಷಕಾರಿ ಹಾವುಗಳು ನಗರದ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಸಾಮಾನ್ಯ. ಆದರೆ ಅರಣ್ಯ ಇಲಾಖೆಯಲ್ಲಿ ಯಾವ ಉರಗ ತಜ್ಞರಾಗಲೀ ಇಲ್ಲವಾಗಿರುವುದರಿಂದ ಹಾವುಗಳನ್ನು ಸುರಕ್ಷಿತವಾಗಿ ಹಿಡಿಯಲು ಉರಗ ತಜ್ಞರನ್ನು ತಾವೇ ಕರೆಸಿಕೊಳ್ಳಬೇಕಾಗುತ್ತದೆ. ಕಾನೂನು ರಚಿಸುವ ಅರಣ್ಯ ಇಲಾಖೆಯು ಪ್ರಾಣಿಗಳನ್ನು ಸಂರಕ್ಷಿಸಲು ಕೂಡ ಸಿದ್ಧತೆ ಮಾಡಿಕೊಂಡಿರಬೇಕು. ಈ ಬಗ್ಗೆ ನಾನು ಮೇಲಧಿಕಾರಿಗಳಿಗೆ ಮನವಿ ಮಾಡಿ ಸರಕಾರದ ಗಮನ ಸೆಳೆಯಲು ಕಾನೂನು ರೀತಿಯಲ್ಲಿ ಹೋರಾಡುವದಾಗಿ ಸ್ಥಳೀಯರು ತಿಳಿಸಿದರು.
Leave a Comment