ಕಾರವಾರ: ಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವದಾಗಿ ಮಾಜಿ ಸಚಿವ, ಶಾಸಕ ಬಸವರಾಜ ಹೊರಟ್ಟಿ ಘೋಷಿಸಿದರು.
ಶನಿವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಭವಿಷ್ಯದ ರಾಜಕಾರಣದಲ್ಲಿ ಯುವಕರಿಗೆ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಪ್ರಜ್ವಲ ರೇವಣ್ಣ ಚುನಾವಣೆಗೆ ಸ್ಪರ್ಧಿಸುವದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಕುಟುಂಬ ರಾಜಕಾರಣವಲ್ಲ ಎಂದು ಅವರು ಹೇಳಿದರು. ತಮ್ಮ ಪುತ್ರ ವಸಂತ ಹೊರಟ್ಟಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವವರು ಪಕ್ಷದಲ್ಲಿ ದುಡಿದಿರಬೇಕು. ಕಾರ್ಯಕರ್ತರೊಂದಿಗೆ ಬೆರತಿರಬೇಕು. ಅಂತವರನ್ನು ಗುರುತಿಸಿ ಪಕ್ಷ ಬಿ.ಪಾರಂ ವಿತರಿಸಲಿದೆ ಎಂದರು.
ಮಾಜಿ ಸಚಿವ ಆನಂದ ಅಸ್ನೋಟಿಕರ್ ಜೆಡಿಎಸ್ ಸೇರುವ ಕುರಿತು ಈಗಾಗಲೇ ಮಾತುಕತೆ ನಡೆದಿದೆ. ಅವರು ಪಕ್ಷಕ್ಕೆ ಬಂದರೆ ಬರಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಚುನಾವಣೆ ಹತ್ತಿರ ಬಂದಾಗ ಪಕ್ಷಾಂತರ ಸಹಜವಾಗಿದ್ದು, ಪದೇ ಪದೇ ಪಕ್ಷ ಬದಲಿಸುವವರನ್ನು ಜನ ನಂಬುವದಿಲ್ಲ. ಹೀಗಾಗಿ ಡಿ.31ರ ಒಳಗೆ ಜೆಡಿಎಸ್ ಪಕ್ಷ ಸೇರುವವರಿಗೆ ಅವಕಾಶವಿದ್ದು, ನಂತರ ಬರುವ ಆಕಾಂಕ್ಷಿಗಳಿಗೆ ಉತ್ತೇಜನ ನೀಡದಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಪಕ್ಷದವರಿಗೂ ಚುನಾವಣೆಯಲ್ಲಿ ಗೆಲ್ಲುವದೇ ಗುರಿಯಾಗಿದೆ. ನೀತಿ ನಿಯಮಗಳಿಗೆ ಬೆಲೆಯಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಅಭಿವೃದ್ದಿ ಕುರಿತು ಚರ್ಚಿಸಲು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅನಾವಷ್ಯಕ ಕಾಲಹರಣ ಮಾಡಿದೆ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವದಕ್ಕಿಂತ ಹೆಚ್ಚಿಗೆ ಕಾಲೆಳೆಯುವ ಕೆಲಸವಾಗಿದೆ ಎಂದು ಅಸಮಧಾನ ಹೊರ ಹಾಕಿದರು.
Leave a Comment