ಕಾರವಾರ:
ಡಿಸೆಂಬರ್ 6 ಮತ್ತು 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಇದರ ರೂಪರೇಷೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಕಾರವಾರ, ಶಿರಸಿ, ಮುಂಡಗೋಡ, ಹಳಿಯಾಳದಲ್ಲಿ ಮುಖ್ಯಮಂತ್ರಿಗಳು ಎರಡು ದಿನ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆಯಲ್ಲಿನ ಪ್ರಮುಖ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಕಟ್ಟಡಗಳ ಉದ್ಘಾಟನೆ ನಡೆಸಲಿದ್ದಾರೆ. ಇದಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಸೇರಿಸುವ ಅವಶ್ಯಕತೆ ಇಲ್ಲ. ಅವರಾಗಿಯೇ ಕಾರ್ಯಕ್ರಮಕ್ಕೆ ಬರಬೇಕು. ಬದಲಾಗಿ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕು. ಅಲ್ಲದೆ ಕಾರ್ಯಕ್ರಮದಲ್ಲಿ ಶಿಸ್ತುಬದ್ದವಾಗಿ ನಡೆಯುವಂತೆ ಫಲಾನುಭವಿಗಳಿಗೆ ಪೂರ್ವ ತಯಾರಿ ಮಾಡುವ ಜವಬ್ದಾರಿಯನ್ನು ಆಯಾ ಇಲಾಖೆಗಳು ವಹಿಸಿಕೊಳ್ಳಬೇಕು ಎಂದು ಹೇಳಿದರು.
ತೀಳ್ಮಾತಿ ಕಡಲತೀರಕ್ಕೆ ತೂಗು ಸೇತುವೆ ಮಂಜೂರಿಯಾಗಿ ವರ್ಷಗಳು ಕಳೆದರೂ ಈವರೆಗೂ ಅದರ ಟೆಂಡರ್ ಕಾರ್ಯ ನಡೆದಿಲ್ಲ. ವಿನಾಃ ಕಾರಣ ವಿಳಂಬ ಮಾಡುವುದು ಸರಿಯಲ್ಲ. ನಿಮಗೆ ಆಗಿಲ್ಲ ಅಂದರೆ ಬೇರೆ ಇಲಾಖೆಗಳಿವೆ. ಅವುಗಳಿಗೆ ಅದರ ಜವಾಬ್ದಾರಿ ವಹಿಸುತ್ತೇನೆ. ಈ ಬಗ್ಗೆ ಕೂಡಲೇ ಕ್ರಮಕೈಗೊಂಡು ಟೆಂಡರ್ ಪ್ರಕ್ರಿಯೇ ಮುಗಿಸುವಂತೆ ಸಚಿವರು ಪಿಡಬ್ಲ್ಯುಡಿ ಅಧಿಕಾರಿಗೆ ಸೂಚಿಸಿದರು. ಸಿಎಂ ಉದ್ಘಾಟನೆ, ಅಡಿಗಲ್ಲು ಮಾಡಬೇಕು ಎನ್ನುವ ಕಾರ್ಯಕ್ರಮಗಳ ಪಟ್ಟಿಯನ್ನು ಎಲ್ಲ ಇಲಾಖೆಗಳ ಅಧಿಕಾರಿಗಳು 48 ಗಂಟೆಯ ಒಳಗೆ ಜಿಲ್ಲಾಡಳಿತಕ್ಕೆ ನೀಡಬೇಕು. ದೊಡ್ಡ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳ ಉದ್ಘಾಟನೆ, ನಿರ್ಮಾಣವಾಗಬೇಕಿರುವ ಕಟ್ಟಡಗಳ ಅಡಿಗಲ್ಲು ನೆರೆವೇರಿಸುವುದನ್ನು ಮಾತ್ರ ಇಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ಎಲ್ಲದಕ್ಕೂ ಸಮಯ ವ್ಯರ್ಥ ಆಗಲಿದೆ. ಹೀಗಾಗಿ ಇದೇ 27ರ 5 ಗಂಟೆಯ ಒಳಗೆ ಆಯಾ ಇಲಾಖೆಯ ಅಧಿಕಾರಿಗಳು ಅವರವರ ಕಾರ್ಯಕ್ರಮಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಹಲವು ಇಲಾಖೆಗಳ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದು, ಸಂಬಂಧಪಟ್ಟ ಆಯಾ ಇಲಾಖೆಗಳು ದುಂದು ವೆಚ್ಚ ಮಾಡದೇ ಎಲ್ಲ ಕಾರ್ಯಕ್ರಮಗಳನ್ನು ಒಂದೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಬೇಕು. ಆಮಂತ್ರಣ ಪತ್ರಿಕೆಯಲ್ಲಿ ಪ್ರೋಟೋಕಾಲ್ ಪ್ರಕಾರ ಜಿಲ್ಲಾಧಿಕಾರಿ ಸೂಚಿಸಿರುವವರ ಹೆಸರುಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಅಲ್ಲದೆ ಆಯಾ ಇಲಾಖೆ ಮಂತ್ರಿಗಳಿಗೆ, ಕಾರ್ಯದರ್ಶಿಗೆ, ಶಾಸಕರಿಗೆ, ಜನಪ್ರತಿನಿಧಿಗಳಿಗೆ ಖುದ್ದಾಗಿ ಆಹ್ವಾನ ನೀಡಬೇಕು. ಜತೆಗೆ ಉದ್ಘಾಟನೆ, ಶಿಲನ್ಯಾಸಗಳಿಗೆ ಸಂಬಂಧಿಸಿದ ಕಲ್ಲುಗಳನ್ನು ಬಣ್ಣಗಳಿಂದ ಬರೆಯಿಸದೇ ಕೆತ್ತನೆ ಮೂಲಕ ಅಚ್ಚು ಹಾಕಬೇಕು ಎಂದು ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದರು.
Leave a Comment