ಹೊನ್ನಾವರ: ಸಂವಿಧಾನ ನಿರ್ಮಾತೃರ ಪರಿಶ್ರಮದಿಂದ ನಮ್ಮ ಸಂವಿಧಾನವು ವಿಶ್ವದ ಸರ್ವ ಶ್ರೇಷ್ಠ ಸಂವಿಧಾನ ಎಂದು ಗುರುತಿಸಿಕೊಂಡಿದೆ, ಅದನ್ನು ಪಾಲಿಸುವ, ಗೌರವಿಸುವ, ಜವಾಬ್ದಾರಿ ದೇಶದ ಪ್ರತಿ ನಾಗರಿಕರದ್ದು ಎಂದು ಹೊನ್ನಾವರ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಧೀಶೆ ಸನ್ಮತಿ ಎಸ್ ಆರ್ ಅಭಿಪ್ರಾಯಪಟ್ಟರು.
ಅವರು ಬುಧವಾರÀ ಸಂವಿಧಾನ ದಿನದ ಪ್ರಯುಕ್ತ ಹೊನ್ನಾವರ ತಾಲೂಕಾ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತವಾಗಿ ಏರ್ಪಡಿಸಿದÀ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಂವಿಧಾನದ ಮೂಲ ಅಶಯವೇ ಸಂವಿಧಾನದ ಪ್ರಿಯಾಂಬಲ್. ಅಂದರೆ ಪೂರ್ವ ಪೀಠಿಕೆ, ಅದು ದೊಡ್ಡ ಇಮಾರತೊಂದರ ಅಡಿಪಾಯದಂತೆ. ದೇಹ ರಚನೆಯಲ್ಲಿ ಅಸ್ಥಿಗಳಂತೆ. ಕಾನೂನು ರಚಿಸುವವರು ಸಂವಿಧಾನದ ಮೂಲ ಆಶಯಗಳಿಗೆ ಭಂಗ ಇಲ್ಲದಂತೆ ಕಾನೂನಗಳನ್ನು ರಚಿಸುತ್ತಾರೆ ಎಂದ ಅವರು ಕೇಶವಾನಂದ ಭಾರತಿ ವಿರುದ್ಧ ಕೇರಳ ಸರ್ಕಾರ ಪ್ರಕರಣವನ್ನು ಉದಾಹರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ಜಡ್ಜ ನ್ಯಾಯಾಧೀಶ ಎಂ.ವಿ ಚೆನ್ನಕೇಶವ ರೆಡ್ಡಿ ಮಾತನಾಡಿ ದೇಶದ ಎಲ್ಲಾ ಕಾನೂನುಗಳ ಮೂಲ ಉದ್ದೇಶ ಮಕ್ಕಳ-ಮಹಿಳೆಯರ, ಅಬಲೆಯರ- ಅಶಕ್ತರ ಹಾಗೂ ನಾಗರಿಕರ ರಕ್ಷಣೆ. ಸಂವಿಧಾನದ ಮೂಲ ಉದ್ದೇಶವೂ ಅದೇ. ಆದ್ದರಿಂದ ನಾವು ಸಂವಿಧಾನವನ್ನು ಗೌರವಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲ ಸಂಘದ ಅಧ್ಯಕ್ಷ ಕೆ.ವಿ ನಾಯ್ಕ ಮಾತನಾಡಿ ಡಾ|| ಬಿ.ಆರ್ ಅಂಬೇಡ್ಕರ್ರವರ ಶ್ರಮ ಮತ್ತು ಮೇಧಾಶಕ್ತಿಯಿಂದ ವಿಶ್ವದ ಸರ್ವ ಶ್ರೇಷ್ಠ ಸಂವಿಧಾನದಲ್ಲಿ ನಮ್ಮ ಸಂವಿಧಾನವು ಒಂದಾಗಿ ರೂಪುಗೊಂಡಿದೆ. ಸಂವಿಧಾನ ರಚನಾ ಸಮಿತಿಯಲ್ಲಿ ಇದ್ದ ಪ್ರತಿಯೋರ್ವರು ಡಾ|| ಬಿ.ಆರ್ ಅಂಬೇಡ್ಕರ್ರವರಂತೆ ಅಭಿನಂದನಾರ್ಹರು ಎಂದರು.
ವೇದಿಕೆಯಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಧೀಶ ಮಧುಕರ ಭಾಗ್ವತ, ಸರ್ಕಾರಿ ಸಹಾಯಕ ಅಭಿಯೋಜಕ ಬದರೀನಾಥ ನಾಯರಿ, ವಕೀಲ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ ಉಪಸ್ಥಿತರಿದ್ದರು. ವಕೀಲೆ ಉಮಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
Leave a Comment