ಕಾರವಾರ: ಆರೋಗ್ಯದಿಂದ ಜೀವಿಸುವದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಧೀಶ ಟಿ.ಗೊವಿಂದಯ್ಯ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.ಹೆಚ.ಒ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್.ಐ.ವಿ ಸೋಂಕು ಭಾದಿತರು ಕೂಡಾ ಸಾಮಾಜಿಕವಾಗಿ ಬದುಕುವ, ಆರೋಗ್ಯ ಪಡೆಯುವ ಹಕ್ಕು ಹೊಂದಿರುತ್ತಾರೆ. ಅವರನ್ನು ಸಮಾಜ ಕೀಳಾಗಿ ಕಾಣಬಾರದು. ಸೋಂಕು ಪೀಡಿತರಿಗೆ ಕಾನೂನು ಸಮಸ್ಯೆಗಳಿದ್ದರೆ ಅವರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಎ.ಆರ್.ಟಿ ಕೇಂದ್ರಗಳಲ್ಲಿ ಉಚಿತ ಕಾನೂನು ಸಲಹೆ ಸೂಚನೆ, ಸೇವೆ ನೀಡಲು ವಕೀಲರನ್ನು ನೇಮಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಎನ್ಅಶೋಕ ಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನರ ಜೀವನ ಶೈಲಿ ಮುಖ್ಯ, ನನ್ನ ಆರೋಗ್ಯ ನನ್ನ ಹಕ್ಕು ಎಂಬುದನ್ನು ಯುವ ಜನತೆ ಅರಿತಾಗ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಂiÀiವಾದಿ ಕೆ.ಬಿ.ನಾಯ್ಕ ಮಾತನಾಡಿ,ಹೆಚ್ಐವಿ ಸೋಂಕು ವಿವಿಧ ಕಾರಣಗಳಿಂದ ಬರುತ್ತದೆ. ಜೀವನದಲ್ಲಿ ಸ್ವಯಂ ನಿಯಂತ್ರಣ, ಸಾಮಾಜಿಕ ಮೌಲ್ಯಗಳು ಮತ್ತು ನೈತಿಕತೆಯ ಪ್ರತಿಪಾದನೆಯಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ. ಹೆಚ್ಐವಿ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ದಿನಾಚರಣೆಯನ್ನುವುದು ಕೇವಲ ಆಚರಣೆಗೆ ಸೀಮಿತವಾಗಿರಬಾರದು ಅಂದು ನಿರ್ಮೂಲನೆಗೆ ಪಣತೊಡಬೇಕು. ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಕಾನೂನು ಸೇವಾ ಪ್ರಾದಿಕಾರಗಳಿವೆ ಅಲ್ಲಿ ಹೆಚ್.ಐ.ವಿ/ಏಡ್ಸ್ ಸೊಂಕು ಪೀಡಿತರು ಉಚಿತವಾಗಿ ಕಾನೂನು ಸಲಹೆ-ಸೂಚನೆ ಸೇವೆ ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರವಾರ ಮೆಡಿಕಲ್ ಕಾಲೇಜ ಕಮ್ಯೂನಿಟಿ ಮೆಡಿಸನ್ ವಿಭಾಗದ ಪ್ರಾಧ್ಯಾಪಕ ಡಾ.ಹೇಮಗೀರಿ ಅವರು ವಿಶೇಷ ಉಪನ್ಯಾಸ ನೀಡಿ ಏಡ್ಸ ಹರಡುವಿಕೆ, ನಿಯಂತ್ರಣ ಮತ್ತು ತಡೆಗಟ್ಟುವ ವಿಧಾನಗಳ ಕುರಿತು ವಿವರಿಸಿದರು. ಹೆಚ್ಐವಿ/ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಸೋಂಕು ಪೀಡಿತರ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯಕವಾಗಿದೆ. ದೇಶದಲ್ಲಿ ಮಿಜೋರಾಮ ರಾಜ್ಯದಲ್ಲಿ ಹೆಚ್.ಐ.ವಿ ಪೀಡಿತರ ಸಂಖ್ಯೆ ಅಧಿಕವಾಗಿದ್ದು ಕರ್ನಾಟಕದಲ್ಲಿ ಸೋಂಕು ಭಾದಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಐವಿ ಪೀಡಿತರ ಪ್ರಮಾಣ ಶೇ.0.25ಇದ್ದು, ರಾಜ್ಯದಲ್ಲಿ 28ನೇ ಸ್ಥಾನ ಪಡೆದಿದೆ. ಎಂದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು. ನಗರದ ಪ್ರಮುಖ ವೃತ್ತಗಳ ಮೂಲಕ ಹಾದು ಹೋದ ಜಾಥಾದಲ್ಲಿ ಜಾನಪದ ಕಲಾವಿದರು ಜನಪದಗಳ ಮೂಲಕ ಹೆಚ್,ಐ.ವಿ/ಏಡ್ಸ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Leave a Comment