ಹೊನ್ನಾವರ: ಭಾರತದಲ್ಲಿ ಸರ್ವಧರ್ಮ ಸಮನ್ವಯತೆಯ ತತ್ವದಡಿಯಲ್ಲಿ ಜನಜೀವನ ನಡೆಯುತ್ತಿದೆ, ಜನರು ಮೂಢನಂಬಿಕೆಗೆ ಒಳಗಾಗಬಾರದು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ ಕರೆ ನೀಡಿದರು. ತಾಲೂಕಿನ ಚಿಕ್ಕನಕೋಡ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ 66ನೇ ವಾರ್ಷಿಕ ವರ್ಧಂತಿ ಉತ್ಸವದ ನಿಮಿತ್ತ ನಡೆದ ಪ್ರತಿಭಾಪುರಸ್ಕಾರ, ಸನ್ಮಾನ, ಸಾಂಸ್ಕøತಿಕ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾರಾಯಣ ಗುರುಗಳು ಹಿಂದೂ ಧರ್ಮದಲ್ಲಿನ ನ್ಯೂನ್ಯತೆ ಮತ್ತು ಮೂಢನಂಬಿಕೆಯನ್ನು ಹೋಗಲಾಡಿಸಲು ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬಸವಣ್ಣನವರು ಹೋರಾಡಿದರು. ದೇವರಾಜ ಅರಸು ಅವರು ದುರ್ಬಲವರ್ಗದವರನ್ನು ಮೇಲೆತ್ತಲು ಶ್ರಮಿಸಿದ್ದಾರೆ. ಇಂದಿನ ದಿನದಲ್ಲಿ ಶಿಕ್ಷಣವು ಹೆಚ್ಚಿನ ಮಹತ್ವ ಪಡೆದಿದೆ. ಒಂದು ಹೊತ್ತಿನ ಊಟವನ್ನಾದರೂ ಬಿಡಿ, ಮಕ್ಕಳಿಗೆ ಶಿಕ್ಷಣ ನೀಡುವುದನ್ನು ತಪ್ಪಿಸಬೇಡಿ. ಮಕ್ಕಳು ಮೂಢನಂಬಿಕೆಗೆ ಒಳಗಾಗದಂತೆ ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ಪಾಲಕರ ಮೇಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂಥವರನ್ನು ದೇವಸ್ಥಾನದ ಸಮಿತಿಯಿಂದ ಪುರಸ್ಕರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ನಂಬಿಕೆಯ ಆಧಾರದ ಮೇಲೆ ಬದುಕು ನಿಂತಿದೆ. ದೇವಾಲಯಗಳು ಸಮಾಜವನ್ನು ಕಟ್ಟುವ ಶೃದ್ದಾಕೇಂದ್ರವಾಗಿದೆ ಎಂದರು. ಜಿ.ಪಂ.ಸದಸ್ಯ ದೀಪಕ ನಾಯ್ಕ ಮಂಕಿ ಮಾತನಾಡಿ, ದೇವರನ್ನು ಪೂಜಿಸುವುದರ ಜೊತೆಗೆ ಮನುಷ್ಯತ್ವವನ್ನು ಅಳವಡಿಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು. ಪತ್ರಕರ್ತ ಗೋಪಾಲಕೃಷ್ಣ ಭಟ್ಟ ಮಾವಿನಕುರ್ವಾ, ಬೆಂಗಳೂರಿನ ಕ್ರೆಟ್ಯೆನ್ ಚಾರಿಟೇಬಲ್ ಟ್ರಸ್ಟ್ ಚೇರ್ಮನ್ ಡೊಮೆನಿಕ್ ರೊಸಾರಿಯೋ, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ನಾಯ್ಕ ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದ ಗಣೇಶ ನಾಯ್ಕ ಮುಗ್ವಾ, ಉತ್ತಮ ಕೃಷಿಕ ದೇವಪ್ಪ ಗಣಪ ನಾಯ್ಕ ಜನ್ನಕಡಕಲ್, ಜತ್ತುಕ್ಕಿ ಗಜಾನನ ನಾರಾಯಣ ನಾಯ್ಕ, ಯೋಗಪಟು ಸುಚಿತ್ರಾ ಈರಪ್ಪ ನಾಯ್ಕ, ಲೈನ್ಮನ್ ರಾಜೇಶ ನಾಯ್ಕ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಬೆಳಿಗ್ಗೆ ಶಾಂತಿ ಹೋಮ, ಕಲಶಾಭಿಷೇಕ, ಸಾಮೂಹಿಕ ಸತ್ಯನಾರಾಯಣ ವೃತ, ನವಚಂಡಿಹೋಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು.
Leave a Comment