ಹಳಿಯಾಳ : ಪುರಾತನ ಕಾಲದಿಂದ ಪಟ್ಟಣದ ಬ್ಲಾಕ್ ನಂ.148ರಲ್ಲಿ ಇರುವ ಲಿಂಗಾಯತ ಸಮಾಜಕ್ಕೆ ಸೇರಿರುವ ಸುಮಾರು 02 ಎಕರೆ 8 ಗುಂಟೆ ರುದ್ರಭೂಮಿಯ ಜಮೀನನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿರುವ ಅನ್ಯಾಯವನ್ನು ಸರಿಪಡಿಸಿ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ವೀರಶೈವ ಸಮಾಜದವರು ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ತಹಶೀಲದಾರ ವಿದ್ಯಾದರ ಗುಳುಗಳಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ : ಪುರಾತನ ಕಾಲದಿಂದ ಇರುವ ಲಿಂಗಾಯತ ಸಮಾಜದ ರುದ್ರಭೂಮಿಯನ್ನು ಸಮಾಜದ ಮುಖಂಡರ ಅರಿವಿಗೆ ಬರದಂತೆ ಮಾರಾಟ ಮಾಡಿರುವ ಅನ್ಯಾಯವನ್ನು ಹಾಗೂ ಖರೀದಿ ನೋಂದಣಿಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಲಾಗಿದೆ. ಈ ರುದ್ರ ಭೂಮಿಯನ್ನು ಬಿನ್ಶೇತ್ಕಿ ಮಾಡಲು ಹಳಿಯಾಳ ಪುರಸಭೆಯವರಿಗೆ ದಿನಾಂಕ: 22-10-1993ರಲ್ಲಿ ನೀಲಿ ನಕ್ಷೆ ಪತ್ರವನ್ನು ನೀಡಿರುತ್ತಾರೆ. ಆದರೇ ಇಂದಿನವರೆಗೂ ಮೃತರ ಅಂತ್ಯಕ್ರಿಯೆಯನ್ನು ಈ ಸ್ಥಳದಲ್ಲಿಯೇ ನಡೆಯುತ್ತಿದೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ನಮ್ಮ ಈ ಭಾಗದ ಸಮಾಜಕ್ಕೆ ಉಂಟಾಗಿರುವ ಅನ್ಯಾಯವನ್ನು ಸರಿಪಡಿಸಿ 02-08-00 ಭೂಮಿಯನ್ನು ರುದ್ರ ಭೂಮಿಗೇ ಮೀಸಲಾಗಿ ಇಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಸೊಮಶೇಖರಯ್ಯಾ ಹೀರೆಮಠ, ಗುಳಪ್ಪಾ ಕಳ್ಳಿಮನಿ, ಶ್ರೀಶೈಲ ತೇಲಿ, ಶ್ರೀನಿವಾಸ ದೊಡಮನಿ, ಸುದಾಕರ ಕುಂಬಾರ,ಬಸವರಾಜ ಬೆಂಡಿಗೆರಿಮಠ, ಉಳೆಪ್ಪಾ ಹುಲಿಕಟ್ಟಿ,ಶಂಕರ ಕವಲವಾಡ, ಶಾಂತವ್ವಾ ಯಡೋಗಿ, ವನಮಾಲಾ ಗೌಡ್ರ, ಸುಶೀಲಾ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.
Leave a Comment