ಕುಮಟಾ: ಗೋಹತ್ಯೆ ನಿಷೇಧದ ಕುರಿತು ಕೇಂದ್ರ ಸರ್ಕಾರ ತಂದಿರುವ ಕಾಯಿದೆ ಮಾರುಕಟ್ಟೆ ನಿಯಂತ್ರಣಕ್ಕೆ ಮಾತ್ರ ಸೀಮಿತವಾಗಿದ್ದು, ಸಂಪೂರ್ಣ ಗೋ ಹತ್ಯೆ ನಿಷೇಧ ಕಾನೂನು ಅಲ್ಲ. ಹೀಗಾಘಿ ಇದಕ್ಕೆ ತಮ್ಮ ಬೆಂಬಲವಿಲ್ಲ ಎಂದು ರಾಮಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀ ಹೇಳಿದರು.
ಭಾನುವಾರ ಸಂಜೆ ಸುದ್ದಿಗೊಷ್ಟಿ ನಡೆಸಿ ಅವರು ಮಾತನಾಡಿದ ಅವರು, ಸಂಪೂರ್ಣವಾಗಿ ಗೋಹತ್ಯೆ ನಿಷೇಧ ಆಗುವವರೆಗೂ ಹೋರಾಟ ಮುಂದುವರೆಸುವದಾಗಿ ಘೋಷಿಸಿದರು. ಯಾವದೇ ಕಾರಣಕ್ಕೂ ನಮ್ಮ ದೋರಣೆ ಬದಲಾಗುವದಿಲ್ಲ. ಈ ಕಾರ್ಯ ಆಗುವವರೆಗೂ ಬಿಡುವದಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಈಗಿರುವ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಸಡಿಲ ಪಡಿಸಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ನಾವು ಮಾತನಾಡುವದಿಲ್ಲ. ಆದರೆ, ದೇಶದಲ್ಲಿ ಸಂಪೂರ್ಣವಾಗಿ ಗೋ ಹತ್ಯೆ ನಿಷೇಧವಾಗುವವರೆಗೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಕಾರ್ಯದಲ್ಲಿ ನಾವು ಶೀಘ್ರದಲ್ಲಿ ವಿಜಯರಾಗುತ್ತೇವೆ. ಗೋ ಅಭಯಯಾತ್ರೆ ಎಂಬ ಕಾರ್ಯಕ್ರಮ ಸುನಾಮಿ ರೀತಿಯಲ್ಲಿ ಬೆಂಗಳೂರು ಹಾಗೂ ದೆಹಲಿಯಾದ್ಯಂತ ತಲುಪಲಿದೆ ಎಂದರು. ಪ್ರಜೆಗಳೊಂದಿಗೆ ಪ್ರಭುಗಳು ಸಹ ಒಂದು ಹಸ್ತಾಕ್ಷರದ ಮೂಲಕ ಗೋ ಹತ್ಯೆಯನ್ನು ತಡೆಯಬಹುದಾಗಿತ್ತು. ಆ ಕಾರ್ಯ ನಡೆಯದ ಕಾರಣ 2003ರಿಂದ ಹಲವಾರು ಯಾತ್ರೆಗಳ ಮೂಲಕ ನಾವು ಗೋ ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ದೇಶದಲ್ಲಿರುವ ಹಲವು ಸ್ವಂತ ಶಕ್ತಿಗಳು ಕೈ ಜೋಡಿಸಿದ್ದು, ಇದು ರೈತ ಸಮಾಜ ಹಾಗೂ ದೇಶದ ಒಳತಿಗಾಗಿ ನಡೆಸುತ್ತಿರುವ ಹೋರಾಟವಾಗಿದೆ ಎಂದರು.
ನಾವು ಹೋರಾಟ ನಡೆಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದ್ದ ಖಸಾಯಿಖಾನೆ ಸ್ಥಗಿತಗೊಂಡಿದೆ. ಕ್ರಮೇಣವಾಗಿ ಗೋ ಹತ್ಯೆಯ ಪ್ರಮಾಣವೂ ಕಡಿಮೆಯಾಗಿದೆ. ಈ ವಿಷಯದಲ್ಲಿ ಆಳುವ ಜನರ ದೋರಣೆ ಬದಲಾಗದಿದ್ದರೂ ಜನರ ನಿಲುವು ಬದಲಾಗಿದೆ ಎಂದರು. ಕುಡ್ಲಗಿ ಮಠದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿ ಮಾತನಾಡಿ, ಅಭಯ ಗೋಯಾತ್ರೆ ವಿಜಯಿ ಯಾತ್ರೆಯಾಗಿದೆ ಎಂದರು.
ಸಾಗರದ ಜ್ಞಾನಾನಂದ ಸ್ವಾಮೀಜಿ, ಮುಂಡರಗಿ ಶಿವಾಚಾರ್ಯ ಸ್ವಾಮೀಜಿ, ಸೊರಬದ ನಂದಿಕೇಶ್ವರ ಶ್ರೀಗಳು, ಕಾರವಾರ ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ., ಗೋಕಾಕ್ನ ಸುಗುಣೇಶ್ವರ ಬ್ರಹ್ಮಾನಂದ ಶ್ರೀಗಳು ಇದ್ದರು.
Leave a Comment