ಹೊನ್ನಾವರ: ಮಾವಿನಕುರ್ವಾ ಗ್ರಾಮಕ್ಕೆ ಸರ್ಕಾರದಿಂದ ಮಂಜೂರಾದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಿರುವ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರು ತಮ್ಮ ಬೆಂಬಲಿಗರ ಓಲೈಕೆಗಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ಪೀಟರ್ ಮೆಂಡಿಸ್ ಹೇಳಿದರು. ಪಟ್ಟಣದಲ್ಲಿ ಬುಧÀವಾರ ಮಾವಿನಕುರ್ವಾದ ನಾಗರೀಕರೊಂದಿಗೆ ಸೇರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮೂರಿಗೆ ಮಂಜೂರಾದ ಸೇತುವೆಯನ್ನು ಗ್ರಾಮಸ್ಥರ ಹಲವು ಕಾಲದ ಬೇಡಿಕೆಯನ್ನು ಧಿಕ್ಕರಿಸಿ ಅವರಿಚ್ಛೆಯಂತೆ ಬೇರೆಡೆ ಸ್ಥಳಾಂತರಿಸಿದ್ದಾರೆ. ಕಳೆದ 23 ವರ್ಷಗಳಿಂದ ನಿರಂತರವಾಗಿ ಸರ್ಕಾರಕ್ಕೆ ಮನವಿಸಲ್ಲಿಸುತ್ತಿದ್ದ ಇದೇ ಗ್ರಾಮದ ಅಲೋರಿಸ್ ಡಾಯಸ್ ಮನವಿಗೆ ಸ್ಪಂದಿಸಿದ ಸರ್ಕಾರವು ಸೇತುವೆಯನ್ನು ಮಂಜೂರಿ ಮಾಡಿತ್ತು. ಮಾವಿನಕುರ್ವಾ ಗ್ರಾಮವು ತಾಲೂಕು ಕೇಂದ್ರದಿಂದ 350 ಮೀಟರ್ ಅಂತರವಿದ್ದರೂ ಸಂಪರ್ಕ ಸೇತುವೆ ಇಲ್ಲದ ಕಾರಣ ಸುಮಾರು 24 ಕಿ.ಮೀ ಸುತ್ತುವರೆದು ಹೋಗಬೇಕಾದ ಪರಿಸ್ಥಿತಿಯಿದೆ. ಇದರಿಂದ ಇಲ್ಲಿಯ ಜನಜೀವನ ಕಷ್ಟಕರವಾಗಿದೆ. ಈ ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಸಣ್ಣ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಪಟ್ಟಣಕ್ಕೆ ಹೋಗಲು ಹತ್ತಿರದ ದಾರಿಯಿಲ್ಲದೇ ಕೃಷಿಕರಿಗೆ, ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಲ್ಲದೇ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹೀಗಿರುವಾಗ ನಮ್ಮೂರಿಗೆ ಬಂದ ಸೇತುವೆಯನ್ನು ಯಾಕೆ ಭಟ್ಕಳ ತಾಲೂಕಿಗೆ ವರ್ಗಾವಣೆ ಮಾಡಿದ್ದೀರಿ? ನಮ್ಮೂರಿನ ಸೇತುವೆ ನಮಗೇ ಸಿಗಬೇಕು. ಇಲ್ಲವಾದಲ್ಲಿ ಊರಿನ ಸಾರ್ವಜನಿಕರು ಸೇರಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು. ಸಮಿತಿಯ ಗೌರವಾಧ್ಯಕ್ಷೆ ಮಾದೇವಿ ಗೌಡ ಮಾತನಾಡಿ, ನೀರಿನಿಂದಲೇ ಸುತ್ತುವರಿದ ತಗ್ಗು ಪ್ರದೇಶವಾದ ಮಾವಿನಕುರ್ವಾ ಭಾಗಕ್ಕೆ ಸೇತುವೆ ನಿರ್ಮಾಣವಾಗಬೇಕು ಎಂದು ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಿದ್ದೆವು. ಗರ್ಭಿಣಿಯರು, ಅನಾರೋಗ್ಯದವರು, ಸಣ್ಣ-ಪುಟ್ಟ ಮಕ್ಕಳು ಸೇತುವೆ ಇಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಕಿಮ್ಮತ್ತಿಟ್ಟು ಸೇತುವೆ ಮಂಜೂರು ಮಾಡಿತ್ತು. ಆದರೆ ಶಾಸಕ ಮಂಕಾಳ ವೈದ್ಯ ಅವರು ನಮ್ಮೂರಿನ ಜನರ ಆಸೆಗೆ ತಣ್ಣೀರೆರೆಚಿದ್ದಾರೆ. 80ನೇ ಇಸ್ವಿಯಿಂದ ಹಂಬಲಿಸುತ್ತಿದ್ದ ಸೇತುವೆ ನಿರ್ಮಾಣದ ಕನಸು ಕಳಚಿಬಿದ್ದಿದೆ. ಶಾಸಕರಾಗಿ ಊರಿಗೆ ಬಂದ ಸೇತುವೆಯನ್ನು ಕಿತ್ತುಕೊಂಂಡು ಜನವಿರೋಧಿ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾವಿನಕುರ್ವೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಶಾಸಕ ಮಂಕಾಳ ವೈದ್ಯ ಮಾವಿನಕುರ್ವಾದ ಇಬ್ಬರು ಭಂಟರ ಓಲೈಕೆಗಾಗಿ ಸೇತುವೆಯನ್ನು ಬೇರೆಡೆ ಬದಲಾಯಿಸಿದ್ದಾರೆ. ಇದು ಕೀಳು ರಾಜಕೀಯವಾಗಿದೆ ಎಂದರು. ಯುವ ಮುಖಂಡ ಅಯ್ಯಪ್ಪ ನಾಯ್ಕ ಮಾತನಾಡಿ, ತಾನು ಕನ್ನಡ ಸಂಘದವನೆಂದು ಹೇಳಿಕೊಳ್ಳುತ್ತಿರುವ ಉದಯರಾಜ ಮೇಸ್ತ ಎಂಬ ವ್ಯಕ್ತಿಯು ಪತ್ರಿಕೆಯಲ್ಲಿ ಮಾವಿನಕುರ್ವಾ ಸೇತುವೆ ವಿಷಯವನ್ನು ಪ್ರಸ್ತಾಪಿಸಿ ಅಸಂಬದ್ದ ಹೇಳಿಕೆಯನ್ನು ನೀಡಿದ್ದು, ಯಾರದೋ ಓಲೈಕೆ ಮಾಡುವ ಬರದಲ್ಲಿ ನಮ್ಮೂರಿನ ಸೇತುವೆ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯೆ ನಾಗವೇಣಿ ಕನ್ಯಾ ಮುಕ್ರಿ, ಊರಿನ ಪ್ರಮುಖರಾದ ಹರಿಶ್ಚಂದ್ರ ನಾಯ್ಕ, ಮಾದೇವ ಗೌಡ, ಬಾಲಚಂದ್ರ ಶಾನಭಾಗ, ಸವಿತಾ ನಾಯ್ಕ, ನಾಗರಾಜ ನಾಯ್ಕ, ನಾಗರಾಜ ಗೌಡ, ವಿನಾಯಕ ನಾಯ್ಕ, ಅರುಣ ಗೌಡ ಇತರರು ಇದ್ದರು.
Leave a Comment