ಹಳಿಯಾಳ: ನೂತನ ತಾಲೂಕು ರಚನೆಯ ಬಗ್ಗೆ ಯಾವುದೇ ವರದಿಗಳಲ್ಲಿಯೂ ಶಿಫಾರಸ್ಸು ಇಲ್ಲದಿದ್ದರೂ ಕೂಡ ಸಚಿವ ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಿಸಲಾಗಿದ್ದು ಜ.1-2018 ನೂತನ ವರ್ಷದಿಂದ ದಾಂಡೇಲಿ ನಗರ ಸ್ವತಂತ್ರ ತಾಲೂಕಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸರ್ಕಾರಿ ಕಾರ್ಯಕ್ರಮದಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಮಂಜೂರಾದ 517 ಕೋಟಿ ರೂ. ವೆಚ್ಚದ 91 ಕಾಮಗಾರಿಗಳ ಉಧ್ಘಾಟನೆ,ಶಂಕುಸ್ಥಾಪನೆ, ಶಿಲಾನ್ಯಾಸ ಕಾರ್ಯಕ್ರಮ, 221 ಕೋಟಿ ರೂ. ವೆಚ್ಚದ ಕಾಳಿ ಏತ ನೀರಾವರಿ ಯೋಜನೆಗೆ ಅಡಿಗಲ್ಲು, ಪಟ್ಟಣದ 24*7 ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡಿ ವಿವಿಧ ಇಲಾಖೆಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್, ಪಟ್ಟಾ, ಪರಿಹಾರ ಇತರ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು. ಕರ್ನಾಟಕದ ಇತಿಹಾಸದಲ್ಲೇ ಒಂದೆ ಜಿಲ್ಲೆಯಲ್ಲಿ ಇಷ್ಟೊಂದು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, ಉಧ್ಘಾಟನೆ ಮಾಡಿದ ನಿದರ್ಶನ ಇಲ್ಲ ಎಂದ ಸಿಎಂ ಉಕ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ 3500ಕೋಟಿ ರೂ. ಮೊತ್ತದ 543 ಕಾಮಗಾರಿಗಳ ಉಧ್ಘಾಟನೆ, ಶಿಲಾನ್ಯಾಸ ನೆರವೆರಿಸಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದರು. ಮುಖ್ಯಮಂತ್ರಿ ಆಗಿ ತಾವೆ ಇಷ್ಟೊಂದು ಅಭಿವೃದ್ದಿ ಕಾರ್ಯ ಮಾಡಿಲ್ಲ ಆದರೇ ದೇಶಪಾಂಡೆ ಅವರು ಅಭಿವೃದ್ದಿ ಪರ್ವವೇ ಮಾಡಿದ್ದು ರಾಜಕೀಯವಾಗಿ ಅಜಾತಶತ್ರು ಆಗಿರುವ ಆದರ್ಶ ರಾಜಕಾರಣಿ ದೇಶಪಾಂಡೆ ರಾಜಕೀಯದಲ್ಲಿ ಮುಂದುವರೆಯಬೇಕು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿ ಈ ಬಾರಿಯ ಚುನಾವಣೆಯಲ್ಲಿ ದೇಶಪಾಂಡೆ ಗೆಲುವು ಖಚಿತ ಎಂದು ಭವಿಷ್ಯ ನುಡಿದರು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಸಂಸ್ಕಾರ ಇಲ್ಲದ ಕೆನರಾ ಸಂಸದ ಅನಂತಕುಮಾರ ಹೆಗಡೆ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯ್ಕ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಪರಿವರ್ತನಾ ಯಾತ್ರೆ, ಜೆಡಿಎಸ್ನ ಕುಮಾರ ಪರ್ವ, ವಿಕಾಸ ಯಾತ್ರೆ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಟಿಕಾ ಪ್ರಹಾರ ನಡೆಸಿದರು. ಲೋಕೊಪಯೋಗಿ ಇಲಾಖೆ ಸಚಿವ ಎಮ್.ಸಿಮಹದೇವಪ್ಪಾ ಮಾತನಾಡಿ ಕಾಂಗ್ರೇಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ 161 ಭರವಸೆಗಳಲ್ಲಿ 155 ಅನುಷ್ಠಾನ ಮಾಡಲಾಗಿರುವ ಕೀರ್ತಿ ತಮ್ಮ ಸರ್ಕಾರಕ್ಕಿದೆ ಎಂದ ಅವರು ಟಿಪ್ಪು ಸುಲ್ತಾನ ಬಗ್ಗೆ ಹೊಗಳಿ ರಾಷ್ಟ್ರಪ್ರೇಮಿ, ಸ್ವತಂತ್ರ ಹೋರಾಟಗಾರ ಟಿಪ್ಪು ಜಯಂತಿ ಆಚರಣೆ ಬಗ್ಗೆ ಬಿಜೆಪಿಗರು ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದಾರೆಂದು ಕಿಡಿ ಕಾರಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿ.6 ಮತ್ತು 7 ರಂದು ನಡೆದ ಕಾಮಗಾರಿಗಳ ಉಧ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಗಿನ್ನೆಸ ದಾಖಲೆ ಸೇರಲಿದೆ ಎಂದ ದೇಶಪಾಂಡೆ ನೀರಾವರಿ ಯೋಜನೆ ಮಂಜೂರಿ ಮಾಡಿದ ಸಿಎಂ ಅವರಿಗೆ ಧನ್ಯವಾದ ಸಲ್ಲಿಸಿದರು ಹಾಗೂ ಹಳಿಯಾಳಕ್ಕೆ 76 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಸಿಎಂ ಅವರು ಮಂಜೂರಿ ನೀಡಿದ್ದಾಗಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ವಿರೋಧ ಪಕ್ಷದವರ ವಿರುದ್ದ ಟೀಕಾ ಪ್ರಹಾರ ನಡೆಸಿ ಸಂಸದ ಅನಂತಕುಮಾರ ಹೆಗಡೆ ಪುಕ್ಕಲು ರಾಜಕಾರಣಿ ಎಂದ ಅವರು ಪ್ರಧಾನಿ ಮೋದಿ ವಿರುದ್ದ ಏಕ ವಚನದಲ್ಲಿ ಟೀಕಾ ಪ್ರಹಾರ ನಡೆಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಅಕ್ರಮ ಸಕ್ರಮ ವಿಚಾರದಲ್ಲಿ ಉ.ಕ. ಜಿಲ್ಲಾಧಿಕಾರಿ ವಿರುದ್ದ ಸಿಎಂ ಸಭೆಯಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು. ಮರಾಠಾ ಸಮುದಾಯದವರೇ ಸಿಂಹಪಾಲು ಇರುವ ಹಳಿಯಾಳ ಕ್ಷೇತ್ರದಲ್ಲಿ ಮರಾಠರನ್ನು 3ಬಿ ಯಿಂದ ಪ್ರವರ್ಗ 2 ಎಗೆ ಸೇರಿಸುವ ಮೀಸಲಾತಿ ನೀಡುವ ಬಗ್ಗೆ ತಮ್ಮ ಭಾಷಣದುದ್ದಕ್ಕೂ ಚಕಾರ ವೆತ್ತದ ಸಚಿವ ದೇಶಪಾಂಡೆ ಅವರು ಕಾರ್ಯಕ್ರಮದ ಕೊನೆಯಲ್ಲಿ ಈ ಬಗ್ಗೆ ಮಾತನಾಡಿ ಮರಾಠರ ಬೇಡಿಕೆಯನ್ನು ಸಿಎಂ ಗಮನಕ್ಕೆ ತಂದಿರುವುದಾಗಿ ಹೇಳಿದರು. ಆದರೇ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಮರಾಠಾ ಮೀಸಲಾತಿ ನೀಡುವ ವಿಷಯದ ಬಗ್ಗೆ ಚಕಾರವೆತ್ತದೆ ಇರುವುದು ಮಾತ್ರ ಮರಾಠಾ ಸಮುದಾಯದಲ್ಲಿ ಬೇಸರ ತರಿಸಿದ್ದಂತು ಸತ್ಯ. ವೇದಿಕೆಯಲ್ಲಿ ಶಾಸಕರಾದ ಮಂಕಾಳು ವೈದ್ಯ. ಸತೀಶ ಸೈಲ್, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸೇರಿದಂತೆ ಪ್ರಮುಖರು ಇದ್ದರು.
Leave a Comment