ಕಾರವಾರ: ದೇಶದ ರಕ್ಷಣೆಗಾಗಿ ಸ್ಥಾಪಿತವಾಗಿರುವ ನೌಕಾನೆಲೆ ಯೋಜನೆಗೆ ಭೂಮಿ ತ್ಯಾಗ ಮಾಡಿದ ಬಹುತೇಕರಿಗೆ ಈಗಾಗಲೇ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಉಳಿದವರಿಗೂ ಸೂಕ್ತ ಪರಿಹಾರ ಒದಗಿಸಲಾಗುವದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದರು.
ಐ.ಎನ್.ಎಸ್ ಚಾಪೆಲ್ ಯುದ್ದನೌಕೆ ವಸ್ತು ಸಂಗ್ರಹಾಲಯದ ಆವರಣದಲ್ಲಿ ಶನಿವಾರ ನಡೆದ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೀಬರ್ಡ ಮೊದಲನೆ ಹಂತಕ್ಕಾಗಿ ಕಾರವಾರ-ಅಂಕೋಲಾ ಜನರು ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಪರಿಹಾರ ಸಿಗಲು ವಿಳಂಬವಾಗಿತ್ತು. ಕಳೆದ ಆರು ತಿಂಗಳ ಅವದಿಯಲ್ಲಿ ಹಂತ ಹಂತವಾಗಿ ಹಲವರಿಗೆ ಪರಿಹಾರ ವಿತರಿಸಲಾಗುತ್ತಿದೆ. ಇನ್ನು ನಾಲ್ಕೈದು ತಿಂಗಳ ಒಳಗೆ ಸಂಪೂರ್ಣವಾಗಿ ಪರಿಹಾರ ವಿತರಣೆ ಮಾಡಲಾಗುವದು ಎಂದು ಹೇಳಿದರು. 22 ಸಾವಿರ ಕೋಟಿ ವೆಚ್ಚದಲ್ಲಿ ಸೀಬರ್ಡ 2ನೇ ಹಂತದ ಕಾಮಗಾರಿ ನಡೆಯಲಿದೆ. ಇದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆ ಕೇಳಿಕೊಳ್ಳಲಾಗುತ್ತದೆ ಎಂದರು. ನಗರಕ್ಕೆ ಇನ್ನೊಂದು ನೌಕಾವಸ್ತು ಸಂಗ್ರಹಾಲಯ ಬರಲಿದ್ದು, ಅದಕ್ಕಾಗಿ ಎಲ್ಲ ಸಿದ್ದತೆ ನಡೆಯುತ್ತಿದೆ ಎಂದರು.
ಐ.ಎನ್.ಎಸ್ ಕದಂಬ ನೌಕಾನೆಲೆ ಕಮಾಡಿಂಗ್ ಅಧಿಕಾರಿ ಕ್ಯಾ. ಅಮನ್ಪ್ರೀತ್ ಸಿಂಗ್ ಮಾತನಾಡಿ, ನೌಕಾನೆಲೆ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ಬಾಂದವ್ಯ ಗಟ್ಟಿಯಾಗಬೇಕಿದೆ. ದೇಶದ ರಕ್ಷಣಾ ವ್ಯವಸ್ಥೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ನಿವೃತ್ತ ಸೈನಿಕ ಬಿಕು ರಾಮಾ ನಾಯ್ಕ ಹಾಗೂ ಯುದ್ದಗಳಲ್ಲಿ ಗಾಯಗೊಂಡ ಮತ್ತು ಮಡಿದ 4 ಸೈನಿಕ ಕುಟುಂಬದ ಸದಸ್ಯರಿಗೆ ಗೌರವಿಸಲಾಯಿತು. ಬಳಿಕ ಸಶಸ್ತ್ರ ಪಡೆಗಳ ದ್ವಜವನ್ನು ಬಿಡುಗಡೆ ಮಾಡಲಾಯಿತು.
ದೇಶಾಭಿಮಾನ, ರಾಷ್ಟ್ರ ರಕ್ಷಣೆ, ಅಂತರಾಷ್ಟ್ರೀಯ ಬಾಂದವ್ಯದ ಕುರಿತು ವಿದ್ಯಾರ್ಥಿ ನಂದಿನಿ ಶೆಟ್ಟಿ ಹಾಗೂ ಫಜಿಯಾ ಅಕ್ಬರ್ ಅಲಿ ಭಾಷಣ ಮಾಡಿದರು. ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಮಂಡಳಿ ಉಪ ನಿರ್ದೇಶಕಿ ಇಂದುಪ್ರಭಾ ಸ್ವಾಗತಿಸಿದರು. ಬಂದರು ಇಲಾಖೆಯ ಅಧಿಕಾರಿ ಸುರೇಶ ಶಟ್ಟಿ ನಿರ್ವಹಿಸಿದರು.
Leave a Comment