ಹಳಿಯಾಳ : ರಾಜಕಾರಣಿಗಳು 24 ಗಂಟೆಗಳ ಕಾಲ ರಾಜಕಾರಣ ಮಾಡದೆ ಕಲೆಯ ಆರಾಧನೆಯಲ್ಲಿಯು ತೊಡಗಿಸಿಕೊಳ್ಳಬೇಕು, ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜೀವನದಲ್ಲಿ ಇತರ ಕಾರ್ಯಕಲಾಪಗಳೊಂದಿಗೆ ಮನೋರಂಜನೆ ಕೂಡ ಮನುಷ್ಯನಿಗೆ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಶನಿವಾರ ಸಾಯಂಕಾಲ ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ನಡೆದ ಕರಾವಳಿ ಉತ್ಸವ-2017 ಕಾರ್ಯಕ್ರಮಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವು ಕೂಡ ಹಳಿಯಾಳದಲ್ಲಿ ಕರಾವಳಿ ಉತ್ಸವ ಅದ್ದೂರಿಯಾಗಿ ನಡೆಸಲಾಗುತ್ತಿದ್ದು ಇದರಲ್ಲಿ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶ ಮಾಡಿಕೊಡಲಾಗಿದೆ ಎಂದ ಅವರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹನ ನೀಡಲು ಇಂತಹ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ವಿಕಲಚೇತನ ಕೀಬೊರ್ಡ ವಾದಕ ಗಣೇಶ ಈಶ್ವರ ಭಟ್ ಉಧ್ಘಾಟಿಸಿ ಮಾತನಾಡಿ ಪ್ರತಿಭೆಗಳಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರೋತ್ಸಹಾನ ದೊರೆಯಬೇಕೆಂದರು. ಖ್ಯಾತ ಚಿತ್ರ ನಿರ್ಮಾಪಕ ಯಶವಂತರಾವ ಸರದೇಶಪಾಂಡೆ ಪ್ರಸ್ತುತ ಪಡಿಸಿದ ರಾಶಿಚಕ್ರ ನಾಟಕದಲ್ಲಿ ವಿವಿಧ ರಾಶಿಯ ಚಿಹ್ನೆಗಳ ಸಂಕೇತಗಳನ್ನು ತಮ್ಮದೆ ಆದ ಹಾಸ್ಯಪೂರ್ಣ ಮಾದರಿಯಲ್ಲಿ ವಿನೋದವಾಗಿ ಸಾದರಪಡಿಸಿ ಸಾವಿರಾರು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಇನ್ನೂ ಸಂಗೀತ ಮಾಂತ್ರಿಕ ಕನ್ನಡ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ ಹಾಗೂ ತಂಡದವರು ನೃತ್ಯದೊಂದಿಗೆ ನಡೆಸಿದ ಸಂಗೀತ ರಸಮಂಜರಿ ಕಾರ್ಯಕ್ರಮ ಯುವಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು. ಸಭಾ ಕಾರ್ಯಕ್ರಮದ ಮೊದಲು ಹಳಿಯಾಳದ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕøತೀಕ, ಜಾನಪದ ನೃತ್ಯ, ಸಂಗೀತ ಗಾಯನದಂತಹ ಕಾರ್ಯಕ್ರಮಗಳು ನಡೆದವು. 10ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಕರಾವಳಿ ಉತ್ಸವದ ಮನೋರಂಜನೆ ಸವಿದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೋಗೇರ, ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯ್ಕ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಅಕ್ರಮ ಸಕ್ರಮ ಸಮೀತಿಯ ಸುಭಾಷ ಕೊರ್ವೆಕರ, ವಕ್ಫ್ ಬೊರ್ಡ ಜಿಲ್ಲಾಧ್ಯಕ್ಷ ಮೊಹಮ್ಮದ ಖಯಾಮ ಮುಗದ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಇತರ ಅಧಿಕಾರಿಗಳು ಇದ್ದರು. ಸಚಿವ ದೇಶಪಾಂಡೆ ಅವರ ಧರ್ಮಪತ್ನಿ ರಾಧಾ ದೇಶಪಾಂಡೆ, ಪುತ್ರ ಹಾಗೂ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸಚಿವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರನ್ನು ವೇದಿಕೆಯ ಎದುರು ಸನ್ಮಾನಿಸಿ ಸ್ಮರಣಿಕೆ ನೀಡಿದರು.
Leave a Comment