ಕಾರವಾರ: 2018-19ನೇ ಸಾಲಿನ ಸಂಭವನೀಯ ವಾರ್ಷಿಕ ಸಾಲ ಯೋಜನೆಯ ವಿವಿರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್ ಚಂದ್ರಶೇಖರ್ ನಾಯಕ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಡಿ ಸಿ ಸಿ ಸಭೆಯಲ್ಲಿ ಬಿಡುಗಡೆಗೊಳಿಸಿದರು.
ಸಂಭವನೀಯ ಸಾಲ ಯೋಜನೆಯ ಬಹುಪಾಲು ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಮೀಸಲಿರಿಸಲಾಗಿದೆ. ಈ ಬಾರಿ ಎಂಟು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಒಟ್ಟಾರೆಯಾಗಿ 449435.89 ಲಕ್ಷ ರೂ. ಸಾಲ ಗುರಿ ಅಂದಾಜಿಸಲಾಗಿದೆ. ಬೆಳೆ ಅಭಿವೃದ್ಧಿ, ನಿರ್ವಹಣೆ ಮತ್ತು ಮಾರುಕಟ್ಟೆ ಹಾಗೂ ಕೃಷಿ ಸಂಬಂಧಿತ ಕಾರ್ಯಗಳಿಗೆ ಒಟ್ಟು 182753.49 ಲಕ್ಷ, ಕೃಷಿ ಕ್ಷೇತ್ರದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ 18523.81 ಲಕ್ಷ ರೂ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ 7236.40 ಲಕ್ಷ ರೂ. ಅತಿ ಸಣ್ಣ, ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ 100028.69 ಲಕ್ಷ ರೂ. ರಫ್ತು ಸಾಲ 2550 ಲಕ್ಷ ರೂ. ಶೈಕ್ಷಣಿಕ ಸಾಲ 20000 ಲಕ್ಷ ರೂ. ವಸತಿ 67830 ಲಕ್ಷ ರೂ. ನವೀಕರಿಸಬಹುದಾದ ಇಂಧನ 2826ಲಕ್ಷ ರೂ., ಇತರೆ 35800 ಲಕ್ಷ ರೂ, ಸಾಮಾಜಿಕ ಮೂಲಸೌಲಭ್ಯ 11887.50 ಲಕ್ಷ ರೂ ಸಾಲ ಅಂದಾಜಿಸಲಾಗಿದೆ.
ಕೆಲವು ಬ್ಯಾಂಕುಗಳು ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಾಲ ನೀಡುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಫಲಾನುಭವಿಗಳಿಂದ ದಾಖಲೆಗಳನ್ನು ಸಂಗ್ರಹಿಸಿ ಸೂಕ್ತ ಸಮಯದಲ್ಲಿ ಸಾಲ ಮಂಜೂರು ಮಾಡಬೇಕು ಎಂದು ಸಿ ಇ ಒ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಉಪಕರಣಗಳ ಕೇಂದ್ರಗಳನ್ನು ಬಲಪಡಿಸುವ ಮೂಲಕ ಕೃಷಿ ಆದಾಯವನ್ನು ದ್ವೀಗುಣಗೊಳಿಸುವುದು ಈ ಬಾರಿಯ ಸಾಲ ಯೋಜನೆಯ ಧ್ಯೇಯವಾಗಿದೆ. ಬ್ಯಾಂಕಿಂಗ್ ನೆರವಿನ ಕ್ಷೇತ್ರವನ್ನು ವಿಸ್ತರಿಸಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು, ಈ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾ ನಬಾರ್ಡ ಅಧಿಕಾರಿ ಎಸ್.ಎಲ್.ಯೋಗೇಶ ಅವರು ಸಂಭವನೀಯ ವಾರ್ಷಿಕ ಸಾಲ ಯೋಜನೆಯ ಬಗ್ಗೆ ಮಾಹಿತಿ ಒದಗಿಸಿದರು.
ಸಿಂಡಿಕೇಟ್ ಬ್ಯಾಂಕ್ ರೀಜನಲ್ ಮ್ಯಾನೇಜರ ಶೈಲಾ ಎ.ಜೆ. ಲೀಡ್ ಬ್ಯಾಂಕ್ ಮ್ಯಾನೇಜರ ರೇವಣ ಉಪಸ್ಥತರಿದ್ದರು.
Leave a Comment