ಹೊನ್ನಾವರ:
ಶ್ರಮಪಟ್ಟು ದುಡಿದವರಿಗೆ, ಸಾಧನೆ ಮಾಡಿದವರಿಗೆ ದೇವರು ಒಲಿಯುತ್ತಾನೆ. ಜೀವನದಲ್ಲಿ ಶ್ರಮ, ನಿಷ್ಠೆ, ಧರ್ಮದಿಂದ ದುಡಿಮೆ ಮಾಡಿ ಉತ್ತಮ ಸಂಸಾರ ಮಾಡುವಂತಾಗಬೇಕು. ದುಡಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು, ಸಂಪತ್ತಿನ ಉಳಿತಾಯದ ಕಡೆಗೂ ಗಮನ ಹರಿಸಬೇಕು. ವ್ಯಸನಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಕೊಂಕಣಿ ಖಾರ್ವಿ ಭವನ ತ್ರಾಸಿಯಲ್ಲಿ ಭೇಟಿ ನೀಡಿ ಆಶೀರ್ವಚನ ನೀಡಿ ಮಾತನಾಡಿದರು.
ವಿದ್ಯೆಯಿಂದ ಸಂಕಲ್ಪ ಹಾಗೂ ಕಾರ್ಯಕ್ರಮಗಳು ರೂಪಿತವಾಗುತ್ತದೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸುಂದರ ಸಮಾಜ ಕಟ್ಟಲು ಪ್ರಯತ್ನಿಸಬೇಕು. ಸಮಾಜದಲ್ಲಿ ಆಗುವ ಬದಲಾವಣೆಗಳಿಗೆ ಸರಿಯಾಗಿ ಜೀವನ ನಡೆಸಬೇಕು, ಆರೋಗ್ಯ ಮತ್ತು ಸ್ವಚ್ಛತೆ ಕಡೆಗೆ ಗಮನಹರಿಸಿ ಸ್ವಸ್ಥ ಸಮಾಜ ನಿರ್ಮಿಸಲು ಕೈಜೋಡಿಸಬೇಕು. ಹೆಣ್ಣು ಮಕ್ಕಳು ಸಂಸಾರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು. ಕೊಂಕಣಿ ಖಾರ್ವಿ ಸಮಾಜದವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಪಾರ ನಂಬಿಕೆ, ಶ್ರದ್ಧೆ, ಭಕ್ತಿ, ಗೌರವ, ಪ್ರೀತಿಯನ್ನಿಟ್ಟುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಮುಂದುವರಿದುಕೊಂಡು ಬರಬೇಕು. ಶ್ರೀ ಮಂಜುನಾಥ ಸ್ವಾಮಿಯು ಸಮಾಜದ ಎಲ್ಲರಿಗೂ ಒಳಿತು ಮಾಡಲಿ ಎಂದು ಹರಸಿದರು.
ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ,ಪ್ರಾಸ್ತಾವಿಕವಾಗಿಮಾತನಾಡಿದರು. ವಸಂತಖಾರ್ವಿ ಭಟ್ಕಳ ಸ್ವಾಗತಿಸಿದರು. ಮೀನುಗಾರಿಕಾ ಉದ್ಯಮಿ ಶೇಷಗಿರಿ ತಾಂಡೇಲ ಕಾಸರಕೋಡ ಟೊಂಕಾ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ಉಪಾಧ್ಯಕ್ಷ ಮೋಹನ ಬಾನಾವಳಿಕರ್, ನಾಗರಾಜ ಖಾರ್ವಿ ಕೊಲ್ಲೂರು, ಕೃಷ್ಣ ತಾಂಡೇಲ ಕುಮಟಾ, ಸೂರ್ಯಕಾಂತ ಸಾರಂಗ ಹೊನ್ನಾವರ, ಮಹಾರುದ್ರ ಬಾನಾವಳಿಕಾರ್, ದೇವಪ್ಪ ತಾಂಡೇಲ ಅಶೋಕ ಕಾಸರಕೋಡ ಸತೀಶ ಮೇಸ್ತ ಶಿರಸಿ, ಎಸ್.ಕೆ.ಮೇಸ್ತ ಸಿದ್ಧಾಪುರ, ಮಹೇಶ ಸೊರಬ, ಅಶೋಕ ಪಾಲೇಕರ್ ಗೋವಾ ಮತ್ತಿತರರು ಉಪಸ್ಥಿತರಿದ್ದರು.
ವೆಂಕಟೇಶ ಮೇಸ್ತ ಹೊನ್ನಾವರ ಕಾರ್ಯಕ್ರಮ ನಿರೂಪಿಸಿದರು.
Leave a Comment