ಹಳಿಯಾಳ : ರಸ್ತೆಯ ಮೇಲೆ ಬಾಗಿದ ಮರಕ್ಕೆ ತಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯಿಂದ ಕೆಳಗೆ ಬಿದ್ದ ಚಾಲಕ ಲಾರಿಯ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ದುರ್ಘಟನೆ ಹಳಿಯಾಳ ತಾಲೂಕಿನ ಹೊಸ ಹಡಗಲಿ ಸಮೀಪದ ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ವಿಶಾಲ ಭೀಮಾಜಿ ಮುನವಳ್ಳಿ(24) ಮೃತ ಯುವ ಚಾಲಕನಾಗಿದ್ದು ಪಟ್ಟಣದ ಕಸಬಾಗಲ್ಲಿ ನಿವಾಸಿಯಾಗಿದ್ದಾನೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ಹಡಗಲಿ ಸಮೀಪದ ಇಳಿಜಾರು ಪ್ರದೇಶದಲ್ಲಿ ರಾಜ್ಯಹೆದ್ದಾರಿಯ ಪಕ್ಕದಲ್ಲಿ ಬೆಳೆದಿರುವ ಜಾಲಿ ಮರ ರಸ್ತೆಯ ಮೇಲೆ ಬಾಗಿದ್ದು ಇದರಿಂದ ಇಲ್ಲಿ 2 ದೊಡ್ಡ ವಾಹನಗಳು ಏಕ ಕಾಲದಲ್ಲಿ ಬಂದರೇ ವಾಹನವನ್ನು ಮುಂದೆ ಚಲಿಸಲಾಗದೆ ಅಪಘಾತ ಸಂಭವಿಸುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಇಂದು ಚಾಲಕ ವಿಶಾಲನ ಸಾವಿಗೆ ಈ ಮರವು ಕಾರಣವಾಗಿದೆ ಎಂದು ಲಾರಿ ಮತ್ತು ಟ್ರಾಕ್ಟರ್ ಚಾಲಕ ಸಂಘದವರು ಆರೋಪಿಸಿದ್ದು ಘಟನೆ ತಿಳಿದು ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ದೂರು ನೀಡಿದ ಅವರು ಕೂಡಲೇ ಮರ ತೆರವುಗೊಳಿಸುವಂತೆ ಆಗ್ರಹಿಸಿದರು. ಇನ್ನೂ ಶನಿವಾರ ರಾತ್ರಿ ಕಾಂಗ್ರೇಸ್ ಮುಖಂಡರೊಬ್ಬರು ಕಬ್ಬು ಸಾಗಾಣಿಕೆ ವಾಹನಗಳಿಂದ ತಮ್ಮ ಸಂಚಾರಕ್ಕೆ ತೀರಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಮ್ಮ ಮನೆಯ ಬಳಿ ಕಾರುಗಳನ್ನು ಅಡ್ಡ ನಿಲ್ಲಿಸಿ ಕಬ್ಬು ಸಾಗಾಣಿಕೆ ವಾಹನಗಳನ್ನು ತಡೆದದ್ದರಿಂದ ರಾತ್ರಿ ಪಾಳಿಯ ವಾಹನಗಳು ತಡವಾಗಿ ಹೋಗಿದ್ದರಿಂದ ಈ ಲಾರಿ ಅಪಘಾತ ಸಂಭವಿಸಿ ಯುವ ಚಾಲಕ ತನ್ನ ಪ್ರಾಣ ಕಳೆದುಕೊಳ್ಳಬೇಕಾಗಿದೆ ಎಂದು ವಿಪ ಸದಸ್ಯ ಘೋಟ್ನೇಕರ ಬಳಿ ತಮ್ಮ ಆಕ್ರೊಶ ವ್ಯಕ್ತಪಡಿಸಿದ ಲಾರಿ ಮತ್ತು ಟ್ರಾಕ್ಟರ್ ಚಾಲಕ ಸಂಘದವರು ಆ ಕಾಂಗ್ರೇಸ್ ಮುಖಂಡರ ಮನೆಗೆ ತೆರಳುವ ರಸ್ತೆ ತಡೆದು ಮೃತ ಚಾಲಕನಿಗೆ ಶೃದ್ದಾಂಜಲಿ ಸಲ್ಲಿಸುವ ಬ್ಯಾನರ್ಗಳನ್ನು ಹಾಕಿ ತಮ್ಮ ಅಸಮಾಧಾನ ಹೊರಹಾಕಿದ ಘಟನೆಯು ನಡೆದಿದೆ.
Leave a Comment