ಹಳಿಯಾಳ : 12ನೇ ಶತಮಾನದಲ್ಲಿಯ ಬಸವ ವಚನಗಳು ಮತ್ತು ಪುರಾಣವು ಇಂದಿನ 21ನೇ ಶತಮಾನಕ್ಕೂ ದಾರಿದೀಪದಂತೆ ಬೆಳಕನ್ನು ಚೆಲ್ಲುತ್ತಿದ್ದು ಅದರ ಮಹತ್ವ ಮತ್ತು ಅಧ್ಯಯನ ಮಾಡುವುದು ಅವಶ್ಯವಾಗಿದೆ, ವಿಶ್ವದ ಕೆಲವು ದೇಶಗಳು ಬಸವ ವಚನಗಳನ್ನು ತಿಳಿಯುವುದರ ಜೊತೆಗೆ ಅವುಗಳ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಆಸಕ್ತಿ ವಹಿಸಿರುವುದು ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರಿಗೆ ನೀಡಿದ ಗೌರವವಾಗಿದೆ ಎಂದು ಉಪ್ಪಿನಬೇಟಗೇರಿ-ಹಳಿಯಾಳ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು. ವೀರಶೈವ ಲಿಂಗಾಯತ ಮತ್ತು ಸರ್ವಧರ್ಮಗಳ ಸಹಯೋಗದೊಂದಿಗೆ ನಗರದ ಶ್ರೀ ಗ್ರಾಮದೇವಿ ಮೈದಾನದಲ್ಲಿ ಕಳೆದ 14 ದಿನಗಳಿಂದ ಬಸವ ಪುರಾಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ಸ್ವಾಮೀಜಿಗಳು ಪಟ್ಟಣದ ಶ್ರೀ ಚನ್ನಬಸವೇಶ್ವರ ಜವಳಿಗಲ್ಲಿ ವಿರಕ್ತ ಮಠದ ಆವರಣದಲ್ಲಿ ಅಡ್ಡ ಪಲ್ಲಕ್ಕಿಯಲ್ಲಿ “ಬಸವಪುರಾಣ” ಗ್ರಂಥನ್ನು ಇಟ್ಟು ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಅಡ್ಡಪಲ್ಲಕ್ಕಿಯಲ್ಲಿ ಸ್ವಾಮೀಜಿಯ ಬದಲು ಬಸವ ಪುರಾಣ :- “ಬಸವಪುರಾಣ”ದ ಗ್ರಂಥವನ್ನು ಅಡ್ಡ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯನ್ನು ಮಾಡುವ ಮೂಲಕ ಅದರ ಮಹತ್ವ ಸಾರಲು ಮುಂದಾಗಿದ್ದೇವೆ. ಬಸವಣ್ಣವರ ವಚನಗಳ ಮೂಲಕ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳು ನೆಲೆಸಲಿ ಜೊತೆಗೆ ಮೂಡ ನಂಬಿಕೆಗಳು ಮತ್ತು ಮೌಡ್ಯಗಳು ದೂರವಾಗಲಿ ಎಂದ ಸ್ವಾಮೀಜಿ ಮುಂದಿನ ಜನಾಂಗಕ್ಕೂ ಬಸವಪುರಾಣ ಮತ್ತು ವಚನಗಳನ್ನು ಹಸ್ತಾಂತರಿಸುವ ಜವಾದ್ದಾರಿ ಎಲ್ಲರ ಮೇಲಿದ್ದು ಅದನ್ನು ಸಮರ್ಥವಾಗಿ ನೇರವೇರಿಸಬೇಕಾಗಿದೆ ಎಂದು ಕರೆ ನೀಡಿದರು. ಅಲಂಕೃತಗೊಂಡ ಅಡ್ಡ ಪಲ್ಲಕ್ಕಿಯಲ್ಲಿ ಬಸವಪುರಾಣವನ್ನು ಇಟ್ಟು ಮಹಿಳೆಯರು ಪೂರ್ಣಕುಂಭ ಮತ್ತು ಪುರಷರು ಭಜನೆ ಮಾಡುವುದರ ಮೂಲಕ ಜವಾಹರಗಲ್ಲಿ, ಗೌರಿಗುಡಿ, ಬಜಾರ, ಮುಖ್ಯರಸ್ತೆ, ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ವನಶ್ರೀ ಸರ್ಕಲ್ ಮೂಲಕ ಸಾಗಿ ಪುರಾಣ ನಡೆಯುತ್ತಿರುವ ಶ್ರೀಗ್ರಾಮದೇವಿ ಮೈದಾನಕ್ಕೆ ಆಗಮಿಸಿತು. ಮೆರವಣಿಗೆಯ ಉದ್ದಕ್ಕೂ ಜನರು ರಂಗೋಲಿ ಹಾಕಿ, ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ತಮ್ಮ ಭಕ್ತಿಯನ್ನು ಮೆರೆದರು. ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮಿ, ಅಮಿನಗಡ ಶಂಕರೇಶ್ವರ ಮಠದ ಶಂಕರಾಜೇಂದ್ರ ಸ್ವಾಮಿ ಮತ್ತು ಕಮತಗಿ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮಿ, ಸಮಿತಿಯ ಶ್ರೀಕಾಂತ ಹೂಲಿ, ಶಿವದೇವ ದೇಸಾಯಿಸ್ವಾಮಿ, ಶಿವು ಶೆಟ್ಟರ, ಬಿ.ಎಚ್.ಶಿವಪ್ಪಾ, ಎಮ್.ಬಿ.ತೋರಣಗಟ್ಟ, ಸಂತೋಷ ಹುಂಡೇಕಾರ, ಉಮೇಶ ಬೋಳಶೆಟ್ಟಿ, ಶೇಖಣ್ಣಾ ಗಾಣಿಗೇರ, ರವೀಂದ್ರ ಹುಂಡೇಕಾರ, ಮಲ್ಲಣ್ಣಾ ವಾಲಿ, ಮಲ್ಲೇಶಿ ಇಟಗಿ, ಬಸವರಾಜ ಶೆಟ್ಟರ್, ಪ್ರಕಾಶ ಬೋಳಶೆಟ್ಟಿ, ಶ್ರೀಶೈಲ್ ಮಠದೇವರು, ಬಸವರಾಜ ಬೆಂಡಿಗೇರಿಮಠ, ವಿರೂಪಾಕ್ಷ ಮೇಲಿನಮನಿ, ಮಂಜುನಾಥ ಹಿರೇಮo, ಶಂಕರ ಚಕ್ರಸಾಲಿ ಇತರರು ಇದ್ದರು.
Leave a Comment