ಹಳಿಯಾಳ : ಹಳಿಯಾಳ ಪುರಸಭೆಯ ಅಧ್ಯಕ್ಷ ಸ್ಥಾನದ 2 ನೇ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪಟ್ಟಣದ ವಾರ್ಡ ನಂ1 ರ ಹಿರಿಯ ಸದಸ್ಯ ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷದಲ್ಲಿನ ಒಪ್ಪಂದದಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಿಕಟಪೂರ್ವ ಅಧ್ಯಕ್ಷ ಉಮೇಶ ಬೋಳಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನೀರಿಕ್ಷೆಯಂತೆ ಶಂಕರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಇಲ್ಲಿಯ ಪುರಸಭೆಯ ಸಭಾಭವನದಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟಣದ ದೇಸಾಯಿಗಲ್ಲಿ, ಬಸವನಗಲ್ಲಿ ಹಾಗೂ ಶೆಟ್ಟಿಗಲ್ಲಿ ಹೊಂದಿರುವ ವಾರ್ಡ ನಂ1 ರ ಸದಸ್ಯ ಕಾಂಗ್ರೇಸ್ನ ಶಂಕರ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ ಅವಿರೋಧವಾಗಿ ಆಗಿದೆ ಎಂದು ಚುನಾವಣಾಧಿಕಾರಿ ತಹಶೀಲದಾರ ವಿದ್ಯಾಧರ ಗುಳಗುಳಿ ಘೋಷಿಸಿದರು. ನೂತನ ಅಧ್ಯಕ್ಷರಿಗೆ ನಾಮಪತ್ರ ಸಲ್ಲಿಕೆಯಲ್ಲಿ ಅನುಮೋದಕರಾಗಿ ಸದಸ್ಯ ಫಯಾಜ ಶೇಖ ಹಾಗೂ ಸೂಚಕರಾಗಿ ಸತ್ಯಜೀತ ಗಿರಿ ಅವರು ಕಾರ್ಯನಿರ್ವಹಿಸಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೇಯಲ್ಲಿ 23 ಸದಸ್ಯರ ಪೈಕಿ 16 ಸದಸ್ಯರು ಪಾಲ್ಗೊಂಡಿದ್ದರು. ಸಿಂಹಪಾಲು ಮರಾಠಾ ಸಮುದಾಯವನ್ನು ಒಳಗೊಂಡಿರುವ ಹಳಿಯಾಳ ತಾಲೂಕಿನ ಪುರಸಭೆಯಲ್ಲಿ ಮರಾಠಾ ಸಮುದಾಯದ ಶಂಕರ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮರಾಠಾ ಸಮುದಾಯದವರು ಪುರಸಭೆಗೆ ಆಗಮಿಸಿ ಅವರನ್ನು ಅಭಿನಂದಿಸಿದರು ಅಲ್ಲದೇ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಪಟ್ಟಣವನ್ನು ಸ್ವಚ್ಚ ಹಾಗೂ ಸುಂದರವಾಗಿಟ್ಟು ರಾಜ್ಯದಲ್ಲೇ ಮಾದರಿ ಪಟ್ಟಣ ಮಾಡಲು ಶ್ರಮಿಸುತ್ತೇನೆ, ಸರ್ಕಾರದಿಂದ ಬಂದ ಅನುದಾನವನ್ನು ಸರಿಯಾಗಿ ವಿನಿಯೋಗಿಸಿ ಅಭಿವೃದ್ದಿ ಮಾಡಲು ಪ್ರಯತ್ನಿಸುತ್ತೇನೆ ಅಲ್ಲದೇ ಪಟ್ಟಣದಲ್ಲಿ ಇನ್ನೂ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಾರ್ವಜನೀಕರ ಹಾಗೂ ಸರ್ವ ಸದಸ್ಯರ ಸಲಹೆ, ಸಹಕಾರ ಪಡೆದು ತಮಗೆ ನೀಡಿದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ನೂತನ ಅಧ್ಯಕ್ಷ ಶಂಕರ ಬೆಳಗಾಂವಕರ ತಿಳಿಸಿದ್ದಾರೆ.
Leave a Comment