ಹಳಿಯಾಳ : ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿ ಕೆರೆಗಳಿಗೆ ನೀರು ತುಂಬಿ ಕುಡಿಯಲು ಹಾಗೂ ನೀರಾವರಿಗಾಗಿ ಸಾಕಷ್ಟು ನೀರು ಸಂಗ್ರಹಗೊಳ್ಳಬೇಕೆಂಬ ಸದುದ್ದೇಶದಿಂದ ಮುಂದಾಲೋಚನೆ ಹೊಂದಿ ಈಗಾಗಲೇ ತಾಲೂಕಿನ 110 ಕೆರೆಗಳ ಹೂಳೆತ್ತಲಾಗಿದ್ದು ಉಳಿದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಕೂಡ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶನಿವಾರ ನಸುಕಿನ ಜಾವ ತಾಲೂಕಿನ ಮುರ್ಕವಾಡ ಗ್ರಾಮದ ಕೆರೆ ಹೂಳೆತ್ತುವ ಪ್ರದೇಶಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದೊಂದಿಗೆ ಭೇಟಿ ನೀಡಿದ ಅವರು ಕಾಮಗಾರಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು ಸಿಎಸ್ಆರ್ ಯೋಜನೆ, ವಿಆರ್.ಡಿಎಮ್ ಟ್ರಸ್ಟ್ ಹಾಗೂ ತಮ್ಮ ಉದ್ಯಮಿ ಮಿತ್ರರ ಸಹಕಾರದಿಂದ ಹಳಿಯಾಳದ 150 ಕೆರೆಗಳಲ್ಲಿ 110 ಕೆರೆಗಳ ಸಂಪೂರ್ಣ ಹೂಳೆತ್ತಲಾಗಿತ್ತು ಈ ಸಂದರ್ಭದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ 40 ಕೆರೆಗಳ ಹುಳೆತ್ತುವ ಕಾರ್ಯಕ್ಕೆ ಅಡ್ಡಿಯಾಗಿತ್ತು ಈಗ ಉಳಿದಿರುವ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜೆ.ಸಿ.ಬಿ ಇಂಡಿಯಾ ಲಿಮಿಟೆಡ್ ಹಾಗೂ ಟಾಟಾ ಹಿಟಾಚಿ ಕನ್ಸಟ್ರಕ್ಷನ್ ಮಶೀನರಿ ಕಂಪನಿ ಧಾರವಾಡ ಇವರಿಂದ ಈಗಾಗಲೇ 6 ಯಂತ್ರಗಳು ಹಳಿಯಾಳದ ಕೆರೆಗಳ ಹುಳೆತ್ತುವ ಕಾರ್ಯಕ್ಕೆ ತೊಡಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ಕೆರೆಯ ಫಲವತ್ತಾದ ಹೂಳನ್ನು ತಮ್ಮ ಕೃಷಿ ಜಮೀನುಗಳಿಗೆ ಬಳುಸವಂತೆ ಹಾಗೂ ಯಾವ ರೈತರಿಗೆ ಹೂಳು ಇಲ್ಲ ಎಂದು ಹೇಳದಿರಿ ಎಂದು ಸಂಬಂಧಿಸಿದವರಿಗೆ ಸೂಚನೆ ಕೂಡ ನೀಡಿದರು. ಈಗಾಗಲೇ ಕಾಳಿನದಿ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಮುಂದಿನ ಕೆಲವೆ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಅಲ್ಲದೇ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಹಳಿಯಾಳಕ್ಕೆ 102 ಕೋಟಿ ರೂ. ಮಂಜೂರಿಯಾಗಿದ್ದು 92 ಹಳ್ಳಿಗಳಲ್ಲಿ ಯೋಜನೆ ಅನುಷ್ಠಾನವಾಗಲಿದ್ದು ಉಳಿದ ಹಳ್ಳಿಗಳಿಗೂ ಈ ಯೊಜನೆ ವಿಸ್ತರಣೆ ಮಾಡಲಾಗುವುದು ಎಂದ ದೇಶಪಾಂಡೆ ಮುಂದಿನ 1ರಿಂದ 2 ವರ್ಷಗಳಲ್ಲಿ ಯೋಜನೆ ಅನುಷ್ಠಾನಗೊಂಡರೇ ಕಾಳಿನದಿಯಿಂದ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 365 ದಿನ ನೀರು ದೊರಕಿ ನೀರಿನ ಸಮಸ್ಯೆ ನಿವಾರಣೆ ಆಗುವುದು ನಿಶ್ಚಿತ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಆರ್.ಡಿ.ಎಮ್.ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಸಂತೋಷ ಸಿದ್ನೆಕೊಪ್ಪ ಇತರರು ಇದ್ದರು.
Leave a Comment