ಹೊನ್ನಾವರ:”ಸಾರ್ವಕಾಲಿಕ ಮೌಲ್ಯಗಳನ್ನೊಳಗೊಂಡಿರುವ ಜೊತೆಗೆ ಸಮಕಾಲಿನ ಬದುಕಿಗೆ ಸಂಗತವಾದ ವಿಚಾರವನ್ನೊಳಗೊಂಡ ಬರಹ ಶ್ರೇಷ್ಠ ಕೃತಿಯೆನಿಸಿಕೊಳ್ಳುತ್ತದೆ’ ಎಂದು ಡಾ.ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ವಿ.ಕೆ.ಹಂಪಿಹೊಳಿ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ “ಕ್ಲಾಸಿಕ್ಸ್ ಇನ್ ಲಿಟರೇಚರ್’ ಎನ್ನುವ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
‘ಕ್ಲಾಸಿಕ್ ಕೃತಿಗಳಲ್ಲಿನ ಕಥೆ,ಪಾತ್ರ,ಮನುಷ್ಯನ ಭಾವನೆಗಳ ನಿರೂಪಣೆ ಅದ್ಭುತವಾಗಿ ಮೂಡಿಬಂದಿರುತ್ತವೆ.ಕೃತಿಯಲ್ಲಿನ ಭಾಷೆಯ ಸೌಂದರ್ಯ ಅಸಾಧಾರಣವಾಗಿರುತ್ತದೆ.ವಾಲ್ಮೀಕಿ,ವ್ಯಾಸ,ಕುಮಾರವ್ಯಾಸ,ಕಾಳಿದಾಸ,ಭವಭೂತಿ,ಶೇಕ್ಸ್ಪಿಯರ್,ಅರಿಸ್ಟಾಟಲ್,ಕೆಲವು ಗ್ರೀಕ್ ಹಾಗೂ ಲ್ಯಾಟಿನ್ ಕೃತಿಗಳಲ್ಲಿ ಈ ಕ್ಲಾಸಿಕ್ ಅಂಶಗಳನ್ನು ಗುರುತಿಸಬಹುದಾಗಿದ್ದು ವಿದ್ಯಾರ್ಥಿಗಳು ಒಂದಾದರೂ ಇಂಥ ಕ್ಲಾಸಿಕ್ ಕೃತಿಯನ್ನು ಓದಬೇಕು’ ಎಂದು ಸಲಹೆ ನೀಡಿದರು.
“ಶ್ರೇಷ್ಠ ಕೃತಿಯನ್ನು ರಚಿಸುವ ವ್ಯಕ್ತಿಯ ಜೀವನವೂ ಶ್ರೇಷ್ಠವಾಗಿರಬೇಕು.ಯಾವುದೇ ಸಿದ್ಧಾಂತದ ಪೂರ್ವಾಗ್ರಹಕ್ಕೆ ಒಳಗಾಗದೇ ಇಂಥ ಕೃತಿಯನ್ನು ಓದಬೇಕು’ ಎಂದು ಹೇಳಿದರು.
ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿರುವ ಕಾಲೇಜಿನ ಪ್ರಾಚಾರ್ಯ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಎಸ್.ಎಸ್.ಹೆಗಡೆ ಅವರನ್ನು ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎಸ್.ಎಸ್.ಹೆಗಡೆ ಮಾತನಾಡಿ,”ಸಂಶೋಧನೆ ಜ್ಞಾನದ ಹಸಿವನ್ನು ಇನ್ನಷ್ಟು ಹೆಚ್ಚಿಸುತ್ತದೆ’ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಉಪಸ್ಥಿತರಿದ್ದರು.
ಪ್ರದೀಪ ನಾಯ್ಕ,ಮಹಾದೇವಿ ಭಟ್,ಹರ್ಷವರ್ಧನ ಪ್ರಾರ್ಥನಾ ಗೀತೆ ಹಾಡಿದರು.ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಹೆಗಡೆ ಸ್ವಾಗತಿಸಿದರು.ಪ್ರೊ.ನೇತ್ರಾವತಿ ಗಾಂವ್ಕರ್ ಅತಿಥಿ ಪರಿಚಯ ಮಾಡಿದರು.ವಿನುತಾ ನಾಯ್ಕ ಸನ್ಮಾನ ಪತ್ರ ವಾಚಿಸಿದರು.ಪ್ರೊ.ನರಸಿಂಹ ಗೌಡ,ಪ್ರೊ.ಭಾಗ್ಯಶ್ರೀ ಹೆಗಡೆ ಸಹಕರಿಸಿದರು.ಸ್ವರ್ಣಾ ಹೆಗಡೆ,ರೇಷ್ಮಾ ನಾಯ್ಕ ನಿರೂಪಿಸಿದರು.ಪ್ರೊ.ಕೆ.ಆರ್.ಶ್ರೀಲತಾ ವಂದಿಸಿದರು.
Leave a Comment