ಹೊನ್ನಾವರ:
“ಜೀವನದಲ್ಲಿ ಸ್ವಂತಿಕೆ ಬೆಳೆಸಿಕೊಳ್ಳುವ ಮೂಲಕ ವ್ಯಕ್ತಿತ್ವಕ್ಕೆ ಒಂದು ಹೊಸ ಆಯಾಮ ನೀಡಲು ಪ್ರಯತ್ನಿಸಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಕಲಾ ಸುಬ್ರಹ್ಮಣ್ಯ ಶಾಸ್ತ್ರಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂತೇಗುಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
“ಮನುಷ್ಯನ ಬದುಕಿನಲ್ಲಿ ಶ್ರಮ ಹಾಗೂ ಸೇವೆಗೆ ಮಹತ್ವದ ಸ್ಥಾನವಿದೆ.ಹೊಸ ದೃಷ್ಟಿಕೋನದೊಂದಿಗೆ ಜೀವನದಲ್ಲಿ ವಿಶಿಷ್ಟ ಸಾಧನೆ ಮಾಡಲು ಚಿಂತನೆ ಅಗತ್ಯ.ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿಗಳ ನಡುವೆ ತಾರತಮ್ಯ ತೋರುವುದರಿಂದ ನಿರ್ಮಲವಾದ ಅವರ ಮನಸ್ಸಿನಲ್ಲಿ ಹುಳಿ ಹಿಂಡಿದಂತಾಗುತ್ತದೆ.
ಎಡ ಅಥವಾ ಬಲಪಂಥೀಯ ವಿಚಾರಧಾರೆಗಳ ಕಡೆ ವಾಲದೆ ಸ್ವಂತ ವೈಚಾರಿಕ ಶಕ್ತಿ ಬೆಳೆಸಿಕೊಳ್ಳಬೇಕು.
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಬದುಕಿನಲ್ಲಿ ಸಾಧನೆ ಮಾಡುವ ಛಲವನ್ನು ಬೆಳೆಸಿಕೊಳ್ಳಬೇಕಿದೆ’ ಎಂದು ಅವರು ಹೇಳಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರೊ.ಜಿ.ಎಸ್.ಹೆಗಡೆ ಮಾತನಾಡಿ,”ಎನ್ಎಸ್ಎಸ್ ಸ್ವಯಂ ಸೇವಕರ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ,ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಿದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಲು ಸಾಧ್ಯ.ಹಣ ಪಡೆಯದೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗದ ಸೂಚನೆಯಂತೆ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಪ್ರೊ.ಎಂ.ಜಿ.ಹೆಗಡೆ ಮಾತನಾಡಿ,”ಎನ್.ಎಸ್.ಎಸ್.ಶಿಬಿರ ವಿದ್ಯಾರ್ಥಿಗಳಿಗೆ ಸಹಕಾರ,ಸಹಬಾಳ್ವೆಯ ಅನುಭವ ನೀಡುತ್ತದೆ.ಶ್ರಮ ಹಾಗೂ ಸೇವೆಯ ಮಾತುಗಳು ಕೃತಿಯಲ್ಲಿ ಅನುಷ್ಠಾನಗೊಳ್ಳಬೇಕು’ ಎಂದು ಹೇಳಿದರು.
ಹೊಸಾಕುಳಿ ಗ್ರಾಮ ಪಂಚಾಯತ್ ಅಧಿಕಾರಿ ಪರಮೇಶ್ವರ ಹೆಗಡೆ ಮಾತನಾಡಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಬ್ರಾಯ ತಿಮ್ಮಣ್ಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಪ್ರೊ.ಸುರೇಶ ಎಸ್.ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರಶಾಂತ ಹೆಗಡೆ ವಂದಿಸಿದರು.
Leave a Comment