ಹೊನ್ನಾವರ:
ಯುವಕರು ಸಂಘಟಿತರಾಗಿ ಬ್ರಷ್ಟಾಚಾರ, ದಬ್ಬಾಳಿಕೆಯ ವಿರುದ್ಧ ಹೋರಾಡಿ ಊರಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡ ಹೇಳಿದರು.
ತಾಲೂಕಿನ ಕಾವೂರ ಶ್ರೀ ಕಾಂಚಿ ಕಾಮಾಕ್ಷಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಆಶ್ರಯದಲ್ಲಿ ನಡೆದ ತೃತೀಯ ವರ್ಷದ ತಾಲೂಕಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಟ್ರೋಫಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಯುವಕರಿಗೆ ಚೈತನ್ಯವನ್ನು ನೀಡುತ್ತದೆ. ಸಮಾಜದಲ್ಲಿ ಉತ್ತಮ ಬದಲಾವಣೆಗೆ ಯುವಕರ ಕೊಡುಗೆ ಮಹತ್ವವಾದುದು ಎಂದರು.
ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಮಾತನಾಡಿ, ಒಳ್ಳೆಯ ಕೆಲಸ ಮಾಡುವಾಗ ಅಡೆತಡೆಗಳು ಬರುವುದು ಸಾಮಾನ್ಯ. ದೇಶಿಯ ಕ್ರೀಡೆಯನ್ನು ಬೆಳೆಸಿ ಗೌರವಿಸಬೇಕು ಎಂದರು.
ಮುಖ್ಯ ಅತಿಥಿ ಬಿಜೆಪಿ ಮುಖಂಡ ಸುನೀಲ ನಾಯ್ಕ ಮಾತನಾಡಿ ಇಂದಿನ ಯುವಕರು ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ಸಮಾಜದಲ್ಲಿ ಆಸ್ತಿ, ಸಂಪತ್ತು ಗಳಿಸದಿದ್ದರೂ ಉತ್ತಮ ಕಾರ್ಯ ಮಾಡಿ ಹೆಸರು ಗಳಿಸಿ ಕೀರ್ತಿ ಗಳಿಸಬೇಕು. ಯುವಕರ ಪಡೆ ಮನಸ್ಸು ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯ ಎಂದರು.
ಸೇಫ್ಸ್ಟಾರ್ ಬ್ಯಾಂಕಿನ ಅಧ್ಯಕ್ಷ ಜಿ.ಜಿ.ಶಂಕರ ಮಾತನಾಡಿ ಕ್ರೀಡಾ ಕ್ಷೇತ್ರದ ಜೊತೆಗೆ ಎಲ್ಲಾ ರಂಗದಲ್ಲೂ ನಮ್ಮ ಯುವಕರು ಮುಂಚೂಣಿಯಲ್ಲಿರಬೇಕು. ಯುವಕರಲ್ಲಿ ಸಂಘಟನೆ ಇದ್ದಲ್ಲಿ ಊರಿನ ಅಭಿವೃದ್ಧಿ ಸಾಧ್ಯ ಎಂದರು.
ಕ್ರೀಡಾಂಗಣ ಉದ್ಘಾಟಿಸಿ ಕಬಡ್ಡಿ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಸೂರಜ ನಾಯ್ಕ ಸೋನಿ ಮಾತನಾಡಿ ನಮ್ಮ ಗ್ರಾಮೀಣ ಕ್ರೀಡೆಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಇಂದಿನ ಯುವ ಪಡೆಯ ಮೇಲಿದೆ. ಎಂದರು. ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಯೋಗಪಟು ಮಹೇಂದ್ರ ಗೌಡ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಚಂದ್ರಹಾಸ ಟಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಆರ್.ಪಿ. ನಾಯ್ಕ, ಪತ್ರಕರ್ತ ಗೋಪಾಲಕೃಷ್ಣ ಭಟ್, ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಕೃಷ್ಣ ಗೌಡ ಹಳಗೇರಿ, ಪೀಟರ್ ಮೆಂಡಿಸ್, ಡಾ. ಆಶಿಕಕುಮಾರ ಹೆಗಡೆ, ಶ್ರೀ ಕಾಂಚಿ ಕಾಮಾಕ್ಷಿ ಗೆಳೆಯರ ಬಳಗದ ಅಧ್ಯಕ್ಷ ಸಂತೋಷ ನಾಯ್ಕ, ಶೈಲೇಶ, ಆಂದ್ರು ಪಿಂಟೊ, ಹನುಮಂತ ಗೌಡ, ವಿನಯ ಶೆಟ್ಟಿ ಇತರರು ಉಪಸ್ಥಿತರಿದ್ದರು.
Leave a Comment