ಹಳಿಯಾಳ ;
ತಾಲೂಕಿನ ಕಬ್ಬು ಬೆಳೆಗಾರರ ಬಹುದಿನಿದಂದ ನೆನೆಗುದಿ ಬಿದ್ದಿರುವ ನ್ಯಾಯಯುತವಾದ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ತಾಲೂಕಾ ಕಬ್ಬು ಬೆಳೆಗಾರರ ಸಂಘದವರು ಪಟ್ಟಣದಲ್ಲಿ 2 ಗಂಟೆಗೂ ಅಧಿಕ ಕಾಲ ರಸ್ತಾ ರೋಖೊ ನಡೆಸಿ ಪ್ರತಿಭಟಿಸಿದರು. ಪಟ್ಟಣದಲ್ಲಿ ಪ್ರತಿಭಟನಾ ಮೇರವಣಿಗೆ ನಡೆಸಿ ಶಿವಾಜಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿಯನ್ನು ನಿರ್ಮಿಸಿ ಸುಮಾರು 2 ಗಂಟೆಗೂ ಅಧಿಕ ಕಾಲ ರಸ್ತಾರೊಖೊ ನಡೆಸಿ ಬಳಿಕ ರಾಷ್ಟ್ರಪತಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಮತ್ತು ತಹಶೀಲದಾರ ವಿಧ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು. ಕೃಷಿಕರು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಮತ್ತು ನ್ಯಾಯಸಮ್ಮತ ಬೆಲೆ ದೊರೆಯದಿದ್ದರೇ ಕೃಷಿಕರ ಬದುಕು ಕಷ್ಟಕರವಾಗಬಹುದು ಎಂಬ ಕಾರಣಕ್ಕೆ ಡಾ. ಸ್ವಾಮಿನಾಥನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಇಗಾಗಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು ಸಹ ಇದುವರೆಗೂ ಅದನ್ನು ಜಾರಿಗೆ ತರದೇ ಮೀನಮೇಷ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಅದನ್ನು ತಕ್ಷಣ ಜಾರಿಗೆ ತರುವಂತೆ, ಜೊತೆಗೆ ದೇಶದ ಎಲ್ಲಾ ರೈತರ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡುವಂತೆ ಆಗ್ರಹಸಿಲಾಯಿತು. ಇಲ್ಲಿಯ ಸಕ್ಕರೆ ಕಾರ್ಖಾನೆಯವರು 2015-16ರ ಕಟಾವು ಮತ್ತು ಸಾಗಾಟದ ಟನ್ಗೆ ರೂ 305 ಬಾಕಿಯನ್ನು ನೀಡಬೇಕು, ಅದರ ಜೊತೆಗೆ ಅದೇ ವರ್ಷದ ಬಾಕಿಯನ್ನು ಸಹ ಬಿಡುಗಡೆ ಮಾಡಬೇಕು, 2017-18 ಸಾಲಿನಲ್ಲಿ ನುರಿಸಿದ ಕಬ್ಬಿಗೆ ರೂ 3 ಸಾವಿರೂ ರೂ ಮುಂಗಡ ಹಣ ನೀಡಬೇಕು, ಈಐಡಿ ಸಕ್ಕರೆ ಕಾರ್ಖಾನೆಯ ವಾಯು ಮಾಲಿನ್ಯದಿಂದ ಸ್ಥಳೀಯ ಜನರು ಹಲವಾರು ರೋಗ ರುಜಿನುಗಳಿಂದ ಬಳಲುತ್ತಿದ್ದಾರೆ. ವಾಯು ಮಾಲಿನ್ಯವನ್ನು ತಡೆಯಲು ತಕ್ಷಣ ಕ್ರಮ ಜರುಗಿಸಬೇಕು, ದ್ವೀಪಕ್ಷೀಯ ಒಪ್ಪಂದ ಜಾರಿಯಾಗಬೇಕು, ಮತ್ತು ಭೀಮಾ ಫಸಲು ಯೋಜನೆಯಿಂದ ಬೆಳೆ ವಿಮೆ ಶೇ 40 ರಷ್ಟು ರೈತರಿಗೆ ದೊರಕಿದ್ದು ಉಳಿದ ಬಾಕಿ ಹಣವನ್ನು ರೈತರಿಗೆ ದೊರೆಯುವಂತೆ ಮಾಡಲು ಕ್ರಮ ಜರುಗಿಸುವಂತೆ ಮತ್ತು ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ ವಿತರಿಸುವಂತೆ ಮನವಿಯ ಮೂಲಕ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ವಿಪ ಸದಸ್ಯ ಘೋಟ್ನೆಕರ ಸ್ಥಳಕ್ಕೆ ಆಗಮಿಸಿ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಇಲ್ಲಿಯ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿದರು. ಸಂಘದ ಅಧ್ಯಕ್ಷ ಶಂಕರ ಕಾಜಗಾರ ಮುಖಂಡರಾದ ಅಶೋಕ ಮೇಟಿ, ಮಲ್ಲಾರಿ ಘಾಡಿ, ಎಸ್.ಕೆ.ಗೌಡಾ,ಉಡಚಪ್ಪಾ ಬೂಬಾಟಿ, ಗಿರೀಶ ಠೊಸೂರು, ನಿತ್ಯಾನಂದ ಗೌಡಾ,ಮಂಜುನಾಥ ಬೆಳಡೊಳ್ಕರ, ಸಾತೋರಿ ಗೊಡಿಮನಿ, ಜಯರಾಮ ಕಳ್ಳಿಮನಿ, ಪುಂಡಲೀಕ ಗೋಡಿಮನಿ, ರಾಮದಾಸ ಬೆಳಗಾಂವಕರ, ಸಂಜು ಮಿಶ್ಯಾಳಿ, ಫಯಾಜ್ ಶೇಖ, ಶ್ರೀಕಾಂತ ಮಿರಾಶಿ, ಶಂಕರ ಬೆಳಗಾಂವಕರ, ಗುಲಾಭಶಾ ಲತೀಫನವರ, ಕೃಷ್ಣಾ ವಡ್ಡರ ಇದ್ದರು.ಪೋಟೊ ; 24 ಎಚ್.ಎಲ್.ವೈ 1 : ಹಳಿಯಾಳ ತಾಲೂಕಾ ಕಬ್ಬು ಬೆಳೆಗಾರರ ಸಂಘದವರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿವಾಜಿ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆಯೊಂದಿಗೆ ರಸ್ತಾ ರೋಖೋ ನಡೆಸಿದರು.
Leave a Comment