ಹೊನ್ನಾವರ:
ಸಾಮಾಜಿಕ ಅನಿಷ್ಟಗಳನ್ನು ತೊಲಗಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯ ನಡೆಯಬೇಕಿದೆ. ಇದಕ್ಕೆ ಯುವಕರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡ ಹೇಳಿದರು.
ತಾಲೂಕಿನ ಹಿರೇಬೈಲ ಗ್ರಾಮದ ಚಿಕ್ಕೊಳ್ಳಿಯಲ್ಲಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚೂರ್ ಕಬಡ್ಡಿ ಅಸೊಸಿಯೆಸನ್ ಇವರ ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜಹಿತ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಇಂದು ಬ್ರಷ್ಟಾಚಾರ, ದಬ್ಬಾಳಿಕೆಯ ವಾತಾವರಣದಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ಯುವಕರು ಅದ್ಬುತ ಚಿಂತನೆಗಳೊಂದಿಗೆ ಸಮಾಜ ಸುಧಾರಣೆಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.
ಕಾರ್ಯಕ್ರಮದ ಊದ್ಘಾಟಿಸಿದ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ನಾಯ್ಕ ಮಾತನಾಡಿ ಚಿಕ್ಕೊಳ್ಳಿಯ ಜನರ ಹೃದಯವಂತಿಕೆ ದೊಡ್ಡದು. ಇಲ್ಲಿ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ನಡೆಯುತ್ತಿದೆ. ಇಲ್ಲಿನ ಸಂಘಟನಾತ್ಮಕ ಬಲ ಇದೇ ರೀತಿ ಮುಂದುವರೆಯಲಿ ಎಂದರು.
ಜಿ ಪಂ ಸದಸ್ಯ ದೀಪಕ್ ನಾಯ್ಕ ಮಾತನಾಡಿ, ಕ್ರೀಡಾ ಕಾರ್ಯಕ್ರಮ ನಡೆಸುವುದು ತುಂಬ ಕಷ್ಟದ ಕೆಲಸ. ಚಿಕ್ಕೊಳ್ಳಿಯಲ್ಲಿ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ನಡೆಸಿ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸಲಾಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಕ್ರಿಡಾಂಗಣ ಉದ್ಘಾಟಿಸಿದ ತಾಲೂಕಾ ಕಬಡ್ಡಿ ಅಸೋಸಸಿಯೆಸನ್ ಅಧ್ಯಕ್ಷರಾದ ಜಿ.ಜಿ.ಶಂಕರ, ಉದ್ಯಮಿ ಕೃಷ್ಣಮೂರ್ತಿ ಭಟ್ ಶಿವಾನಿ, ಗಣೇಶ ನಾಯ್ಕ, ನಾಗವೇಣಿ ನಾಯ್ಕ, ವಿ.ಡಿ.ನಾಯ್ಕ ಮಾತನಾಡಿದರು. ಸತ್ಯ ಜಾವಗಲ್, ರವಿ ನಾಯ್ಕ, ಸುರೇಶ ಗೌಡ, ನಾಗರಾಜ ನಾಯ್ಕ, ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು.
ಖ್ಯಾತ ವೈದ್ಯ ಡಾ. ಆಶಿಕಕುಮಾರ ಹೆಗ್ಡೆ ಮತ್ತು ಹಿರಿಯ ಮರಕಸಬುದಾರ ಕೃಷ್ಣ ಗೌಡ ಇವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಸತೀಶ ಭಂಡಾರಿ ಸ್ವಾಗತಿಸಿದರು. ರಮೇಶ ನಾಯ್ಕ ವಂದನಾರ್ಪಣೆ ಮಾಡಿದರು. ಗೆಳೆಯರ ಬಳಗದ ಸದಸ್ಯರು ಸಹಕರಿಸಿದರು. ಶಿಕ್ಷಕ ಯಶವಂತ ನಾಯ್ಕ ನಿರ್ವಹಿಸಿದರು.
Leave a Comment