ಹಳಿಯಾಳ:
ಕರ್ನಾಟಕ ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಮಾರ್ಚ್ 5ರಂದು ಜಪಾನ್ ಮತ್ತು ದಕ್ಷಿಣಕೊರಿಯಾಕ್ಕೆ ಭೇಟಿ ನೀಡಲಿದೆ ಎಂದು ಸಚಿವರ ಹಳಿಯಾಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲಿಗೆ ಜಪಾನ್ಗೆ ಭೇಟಿ ನೀಡಲಿರುವ ನಿಯೋಗವು ಅಲ್ಲಿನ ಮಿಫ್ರೆಚರ್ ಪ್ರಾಂತೀಯ ಸರ್ಕಾರದೊಂದಿಗೆ ಕರ್ನಾಟಕ ರಾಜ್ಯವು ಈಗಾಗಲೇ ಹೊಂದಿರುವ ಪರಸ್ಪರ ತಿಳಿವಳಿಕೆ ಒಪ್ಪಂದವನ್ನು ನವೀಕರಿಸಿಕೊಳ್ಳಲಿದೆ. ಅಲ್ಲದೆ, ಕರ್ನಾಟಕಕ್ಕೆ ಬಂದು ಹೆಚ್ಚಿನ ಬಂಡವಾಳ ಹೂಡುವಂತೆ ಅಲ್ಲಿನ ಉದ್ಯಮರಂಗದ ಧುರೀಣರೊಂದಿಗೆ ನಿಯೋಗವು ಮಾತುಕತೆ ನಡೆಸಲಿದೆ.
ದಕ್ಷಿಣಕೊರಿಯಾದಲ್ಲಿ ಕೂಡ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ನಿಯೋಗವು ರಾಜ್ಯಕ್ಕೆ ಹೂಡಿಕೆಯನ್ನು ಸೆಳೆಯುವ ಉದ್ದೇಶದಿಂದ ಹಲವು ಉದ್ಯಮ ಸಂಸ್ಥೆಗಳೊಂದಿಗೆ ರಾಜ್ಯದ ಬಂಡವಾಳ ಸ್ನೇಹಿ ನೀತಿ ಕುರಿತು ಸಂವಾದ ನಡೆಸಲಿದೆ.
ಎರಡೂ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಕೂಡ ರಾಜ್ಯದ ನಿಯೋಗವು ವಿಚಾರ ವಿನಿಮಯ ನಡೆಸಲಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿಸಲಾಗಿದೆ.
Leave a Comment