ಹೊನ್ನಾವರ. ತಾಲೂಕಿನ ಕಡ್ನೀರಿನ ಶ್ರೀ ದಕ್ಷಿಣಕಾಳಿ ಕ್ರೀಡಾ ಸಮಿತಿ ಆಶ್ರಯದಲ್ಲಿ ಹೊನಲು ಬೆಳಕಿನ ಕೌಂಟಿ ಕ್ರಿಕೆಟ್ ಪಂದ್ಯಾವಳಿಯು ಕಡ್ನೀರಿನ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ದಕ್ಷಿಣಕಾಳಿ ಕ್ರೀಡಾ ಸಮಿತಿಯವರು ಮನರಂಜನೆಗಾಗಿ ಕೌಂಟಿ ಕ್ರಿಕೆಟ್ ಎಂಬ ಚಿಕ್ಕ ಆವೃತ್ತಿಯ ಕ್ರಿಕೆಟ್ ನ್ನು ಚಿಕ್ಕದಾದ ಕ್ರೀಡಾಂಗಣದಲ್ಲಿನ ಚೊಕ್ಕವಾಗಿ ಆಯೋಜಿಸಿದ್ದಾರೆ. ಈ ಸಮಿತಿಯು ಉತ್ತಮ ಸಂಘಟನೆಯೊಂದಿಗೆ ಬಲಿಷ್ಠರಾಗಿ ಕ್ರೀಡೆಯೊಂದಿಗೆ ಸಾಂಸ್ಕøತಿಕ ಹಾಗೂ ಸಮಾಜಮುಖಿ ಕೆಲಸಗಳತ್ತ ಮುತುವರ್ಜಿ ವಹಿಸಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರಕಟಿಸುವ ಅನೇಕ ಯೋಜನೆಗಳು ಅನೇಕ ಬಾರಿ ಬಡವರಿಗೆ ತಲುಪುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇಂತಹ ಸಂಘಟನೆಗಳು ಸರಕಾರದ ಸೌಲಭ್ಯಗಳನ್ನು ಬಡವರ ಮನೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಆ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಾಯಹಸ್ತ ಚಾಚಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಇವೆರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇದಿಕೆಯಲ್ಲಿ ಸನ್ಮಾನಿಸಲ್ಪಟ್ಟ ನಾಟಿ ವೈದ್ಯರಾದ ಶ್ರೀಧರ ವಿ. ನಾಯ್ಕ ಅವರು ತಾಲೂಕು ಅಷ್ಟೇ ಅಲ್ಲದೇ ಜಿಲ್ಲೆಯಲ್ಲೂ ಕೂಡಾ ಸಾಕಷ್ಟು ಪುರಸ್ಕಾರಗಳನ್ನು ಪಡೆದಿದ್ದಾರೆ. ಇಂತಹವರನ್ನು ಸನ್ಮಾನಿಸುವುದು ಬಹಳ ಅರ್ಥಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆಯುವಂತಾಗಲಿ ಹಾಗೂ ಸಮಾಜಕ್ಕೆ ಇವರಿಂದ ಇನ್ನೂ ಹೆಚ್ಚಿನ ವೈದ್ಯಕೀಯ ಸೇವೆ ದೊರೆಯುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಟ್ರೋಫಿ ಅನಾವರಣಗೊಳಿಸಿದ ರವಿಕುಮಾರ ಶೆಟ್ಟಿ ಮಾತನಾಡಿ ಸಂಘಟನೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಈ ಸಮಿತಿಯವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಜರುಗಲಿ ಎಂದರು.
ತಿಮ್ಮಪ್ಪ ನಾಯ್ಕ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಕಣ ಉದ್ಘಾಟಕರಾಗಿ ಆಗಮಿಸಿದ ಜಿ. ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ, ಚಂದಾವರ ಗ್ರಾ. ಪಂ. ಸದಸ್ಯರಾದ ವಿನಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Comment