ಹಳಿಯಾಳ :
ಇಂದಿರಾ ಗಾಂಧೀ ಅವರು ಬಡವರ ಸಲುವಾಗಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಅವರಿಗೆ ಯಾವುದೇ ನಿರ್ಭಂಧಗಳು ಇಲ್ಲದೇ ಸಾಲಗಳನ್ನು ನೀಡಿದ ದಿಟ್ಟ ಮಹಿಳೆಯಾಗಿದ್ದಳು. ಇಂದಿಗೂ ಇಂದಿರಾ ಗಾಂಧೀ ಅವರನ್ನು ಬಡವರ ಮಹಿಳೆ ಎಂದು ವಿಶ್ವದಲ್ಲಿ ಗುರುತಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸುಮಾರು 52 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾದ “ಇಂದಿರಾ ಕ್ಯಾಂಟಿನ್”ನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವರು ಹಸಿವು ಮುಕ್ತ ಕರ್ನಾಟಕಕ್ಕಾಗಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು ಅದರ ಅಂಗವಾಗಿ ಇಂದಿರಾ ಕ್ಯಾಂಟಿನಗಳನ್ನು ರಾಜ್ಯದಲ್ಲೆಡೆ ಸ್ಥಾಪಿಸಲಾಗುತ್ತಿದ್ದು ಬಡವರು, ಕೂಲಿಕಾರರು ಇದರ ಪ್ರಯೋಜನ ಪಡೆಯಬೇಕೆಂದರು. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟಿನ ಸ್ಥಾಪಿಸುವ ಉದ್ದೇಶ ಸರ್ಕಾರ ಹೊಂದಿದೆ ಎಂದರು. ಹಲವಾರು ದಶಕಗಳ ಹಿಂದೆಯೇ “ಗರಿಬೀ ಹಟಾವೊ” ಯೋಜನೆಯ ಮೂಲಕ ದೇಶದ ಬಹುತೇಕ ಜನರನ್ನು ಬಡತನ ರೇಖೆಗಿಂತ ಮೇಲೆ ತಂದ ಕೀರ್ತಿ ಇಂದಿರಾಜೀ ಅವರಿಗೆ ಸಲ್ಲುತ್ತದೆ ಎಂದು ಇಂದಿರಾಗಾಂಧಿ ಸರ್ಕಾರದ ಕಾರ್ಯಗಳನ್ನು ಶ್ಲಾಘಿಸಿದ ದೇಶಪಾಂಡೆ ಇಂದಿರಾ ಕ್ಯಾಂಟಿನ್ ಕೇವಲ ಬಡವರಿಗೆ ಮಾತ್ರ ಸೀಮಿತವಾಗಿದ್ದು ಪ್ರತಿ ದಿನ 200 ಜನರಿಗೆ ಮುಂಜಾನೆ ಕೇವಲ 5 ರೂ ವೆಚ್ಚದಲ್ಲಿ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಕೇವಲ 10 ರೂ ವೆಚ್ಚದಲ್ಲಿ ಊಟವನ್ನು ಪೊರೈಸಲು ಆದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರ ಸ್ಪಂದನೆಯನ್ನು ಪರಿಗಣಿಸಿ ಅದನ್ನು 300 ಜನರಿಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು. ಸಚಿವರು ಕ್ಯಾಂಟಿನ್ ಕಾಮಗಾರಿಯನ್ನು ಪರಿಶೀಲಿಸಿ, ಜನರಿಗೆ ಉಪಹಾರವನ್ನು ಬಡಿಸಿ, ತಾವು ಅದರ ರುಚಿಯನ್ನು ಸವಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಉಪಾಧ್ಯಕ್ಷ ಅರುಣ ಬೂಬಾಟಿ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್. ಮಹೇಶ್ರಿ ಮಿಶ್ಯಾಳಿ, ಪುರಸಭೆ ಸದಸ್ಯರಾದ ಸತ್ಯಜೀತ ಗಿರಿ, ಮಾಲಾ ಬ್ರಿಗಾಂಜಾ, ಅನಿಲ್ ಫರ್ನಾಂಡೀಸ್, ಮುಖ್ಯಾಧಿಕಾರಿ ಕೇಶವ ಚೌಗುಲೆ ಇದ್ದರು.
Leave a Comment