ಹೊನ್ನಾವರ:
ಪೌರಾಣಿಕ ಹಿನ್ನೆಲೆ ಇರುವ ರಾಮತೀರ್ಥಕ್ಕೆ ಸಮೀಪದ ಪುರಾತನ ಅರೆಸಾಮಿ ಕೆರೆಯನ್ನು ಅಭಿವೃದ್ಧಿಪಡಿಸಿ ಅದನ್ನೊಂದು ಪರಿಸರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇನೆ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ರಾಜ್ಯ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು.
ಶಿರಸಿಯ ಸಚಿವರ ನಿವಾಸದಲ್ಲಿ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ನನ್ನ ಕನಸಿನ ಹೊನ್ನಾವರ ಸಂಘಟನೆಗಳ ವತಿಯಿಂದ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿ ಅರ್ಪಿಸಲಾಯಿತು.
ಸಚಿವರಿಗೆ ಮನವಿ ಅರ್ಪಿಸಿದ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ,”ಅರೆಸಾಮಿ ಕೆರೆಗೆ ಐತಿಹಾಸಿಕ,ಪಾರಿಸಾರಿಕ,ಜೈವಿಕ ಹಾಗೂ ಭೌಗೋಲಿಕ ಮಹತ್ವವಿದೆ.ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚಿದರೆ ಸಮೀಪದ ರಾಮತೀರ್ಥದ ಜಲಧಾರೆಗಳು ಮೈದುಂಬಿಕೊಳ್ಳಲು ಸಾಧ್ಯವಾಗುವ ಜೊತೆಗೆ ಸುತ್ತಲಿನ ಪ್ರದೇಶದ ಅಂತರ್ಜಲ ಮಟ್ಟ ಹೆಚ್ಚುತ್ತದೆ.ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ದೈವೀವನ ಕೆರೆಯ ಹತ್ತಿರವಿದ್ದು ಪ್ರಾಣಿ,ಪಕ್ಷಿಗಳಿಗೂ ಅನುಕೂಲವಾಗುವಂತೆ ಕೆರೆ ಹಾಗೂ ಸುತ್ತಮುತ್ತಲ ಜಾಗವನ್ನು ಅಬಿವೃದ್ಧಿಪಡಿಸಿ ಪಿಲಿಕುಳ ಮಾದರಿಯಲ್ಲಿ ಇದನ್ನೊಂದು ಪರಿಸರ ಪ್ರವಾಸಿ ತಾಣವಾಗಿಸಬಹುದ.ಅಭಿವೃದ್ಧಿಯ ನೀಲನಕ್ಷೆ ಅನುಷ್ಠಾನಗೊಳಿಸಲು ಆರಂಭದಲ್ಲಿ ಸುಮಾರು 5 ಕೋಟಿ ರೂಪಾಯಿ ಅಗತ್ಯವಿದೆ.ಪ್ರಸ್ತುತ ಅಭಿವೃದ್ಧಿಯಿಂದ ನೇರವಾಗಿ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡಬಹುದು.ಕೆರೆಯ ಅಬಿವೃದ್ಧಿಗೆ ಸಂಬಂಧಿಸಿದಂತೆ ಸಮಿತಿಯ ಮನವಿಗೆ ಸ್ಪಂದಿಸಿ ಜಿಲ್ಲಾಧಿಕಾರಿ ಅಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ.ಆದರೆ ಯೋಜನೆಗಾಗಿ ಅಗತ್ಯ ಹಣ ದೊರೆತಿಲ್ಲ’ ಎಂದು ವಿವರಿಸಿದರು.
ಮನವಿ ಸ್ವೀಕರಿಸಿದ ಸಚಿವರು,”ಗೋಕರ್ಣದ ಕೋಟಿತೀರ್ಥ,ಶಿರಸಿಯ ಸೋದೆ ಕೆರೆಗಳ ನೈರ್ಮಲ್ಯೀಕರಣ ಹಾಗೂ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲಾಗಿದೆ.ಅರೆಸಾಮಿ ಕೆರೆಯನ್ನು ಪರಿಸರ ಪ್ರವಾಸಿ ತಾಣವಾಗಿಸುವ ಕುರಿತಂತೆ ಜಿಲ್ಲಾಧಿಕಾರಿಯಿಂದ ಪ್ರಸ್ತಾವನೆ ತರಿಸಿಕೊಳ್ಳುತ್ತೇನೆ.ಯೋಜನೆಯ ಅನುಷ್ಠಾನಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಿಕೊಡುತ್ತೇನೆ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನದಾಸ್ ನಾಯಕ,ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಎಂ.ಜಿ.ಹೆಗಡೆ,ನನ್ನ ಕನಸಿನ ಹೊನ್ನಾವರದ ಸಂಚಾಲಕ ಮಹೇಶ ಕಲ್ಯಾಣಪುರ,ಸದಸ್ಯ ರಾಘವೇಂದ್ರ ಮೇಸ್ತ,ಅರುಣ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment