ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಯುವಕ ಪರೇಶ್ ಮೆಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಸುಳ್ಳು ಎಂದು ತನ್ನ ಪೊಸ್ಟ ಕಾರ್ಡ ಕನ್ನಡ ನ್ಯೂಸ್ ಪೊರ್ಟಲ್ನಲ್ಲಿ(ಅಂತರ್ಜಾಲ ಸುದ್ದಿ ತಾಣದಲ್ಲಿ) ಸುದ್ದಿ ಪ್ರಕಟಿಸಿದ್ದ ಸುದ್ದಿ ಸಂಪಾದಕ ಮಹೇಶ ವಿಕ್ರಮ ಹೆಗಡೆ ಅವರನ್ನು ಹಳಿಯಾಳ ಪೋಲಿಸರು ಬೆಂಗಳೂರಿನಲ್ಲಿ ಬಂಧಿಸಿ ಹಳಿಯಾಳ ಠಾಣೆಗೆ ಕರೆತಂದಿರುವ ವಿದ್ಯಮಾನ ಭಾನುವಾರ ನಡೆದಿದೆ. ಜಿಲ್ಲೆಯಲ್ಲಿ ಪರೇಶ ಮೆಸ್ತ ಸಾವು ಪ್ರಕರಣದ ಬಳಿಕ ಅಂತರ್ಜಾಲ, ಫೇಸ್ಬುಕ್, ವಾಟ್ಸ್ಪ್ ಗಳಲ್ಲಿ ಪ್ರಚೋದನಾತ್ಮಕ, ಸುಳ್ಳು ವದಂತಿಗಳು ಹಬ್ಬಿ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಠಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅಂತಹವರ ಮೇಲೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದರು. ಅಲ್ಲದೇ ಪೋಲಿಸ್ ವರಿಷ್ಠಾಧಿಕಾರಿಗಳು ಸಹಿತ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಶಾಂತಿ ಕಾಪಾಡುವಂತೆ, ಸುಳ್ಳು, ಸುದ್ದಿ ಪ್ರಚೋದನಾಕಾರಿ ಹೇಳಿಕೆಗಳು ನೀಡುವವರ ಮೇಲೆ ನಿಗಾ ವಹಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮೂಲತಃ ದಕ್ಷಿಣ ಕನ್ನಡದ ಮೂಡಬಿದಿರೆಯವರಾದ ಮಹೇಶ ವಿಕ್ರಮ ಹೆಗಡೆ ಅವರು ಬೆಂಗಳೂರಿನಲ್ಲಿ ವಾಸವಿದ್ದು ಪೊಸ್ಟ ಕಾರ್ಡ ಕನ್ನಡ ನ್ಯೂಸ್ ಪೊರ್ಟಲ್ ಎಂಬ ಅಂತರ್ಜಾಲ ಸುದ್ದಿ ತಾಣವನ್ನು ಹೊಂದಿದ್ದು ಪರೇಶ್ ಮೇಸ್ತ ಸಾವು ಕುರಿತು ನಿರಂತರ ಸುದ್ದಿ ಪ್ರಕಟಿಸಿದ್ದರು ಅಲ್ಲದೇ ಈ ಸಂದರ್ಭದಲ್ಲಿ ಮೇಸ್ತ ಸಾವಿನ ಮರಣೋತ್ತರ ಸುಳ್ಳು ಎಂದು ಪ್ರಚೋದನಾತ್ಮಕವಾಗಿ ಪ್ರಕಟಿಸಿ ಸಮಾಜದ ಸ್ವಾಸ್ಥ್ಯ ಹಾಳಾಗಲು ಕಾರಣರಾಗಿದ್ದಾರೆಂದು ಅವರ ಮೇಲೆ ಡಿಸೆಂಬರ್ ತಿಂಗಳಿನಲ್ಲಿಯೇ ಹಳಿಯಾಳ ಠಾಣೆಯಲ್ಲಿ ಐಪಿಸಿ ಕಲಂ 153,153ಎ ಹಾಗೂ 505 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪಿಎಸ್ಐ ಆನಂದಮೂರ್ತಿ ಅವರು ಭಾನುವಾರ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿ ಹಳಿಯಾಳಕ್ಕೆ ಕರೆತಂದು ದಾಂಡೇಲಿ ನ್ಯಾಯಾಧಿಶರ ಎದುರು ಹಾಜರು ಪಡಿಸಿದ್ದು ಹೆಗಡೆಗೆ ದಿ.21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
Leave a Comment