ಹೊನ್ನಾವರ : ಡಾ|| ಬಾಬಾ ಸಾಹೇಬ ಅಂಬೇಡ್ಕರ್ರವರು ಮಹಾನ್ ಮಾನವತಾವಾದಿಗಳಾಗಿದ್ದರು. ಅವರು ರಚಿಸಿದ ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದ್ದು ಡಾ|| ಅಂಬೇಡ್ಕರ್ರವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಕೆ.ಪಿ.ಸಿ.ಸಿ ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೇಸ್ ಏರ್ಪಡಿಸಿದ ಭಾರತ ರತ್ನ ವಿಜೇತ, ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಜಾತಿ, ಹತ್ತಾರು ಧರ್ಮಗಳು, ಅನೇಕ ಭಾಷೆಗಳ ನಡುವೆಯೂ ನಾವು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ಮತ್ತು ಸ್ನೇಹದಿಂದ ಬದುಕುತ್ತಿದ್ದರೆ ಅದು ಡಾ|| ಬಾಬಾ ಸಾಹೇಬ ಅಂಬೇಡ್ಕರ್ರವರು ಭಾರತಕ್ಕೆ ನೀಡಿದ ಸಂವಿಧಾನದ ಮೂಲಕ ಎನ್ನುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು. ಇಂತಹ ಮಹಾನ್ ಚಿಂತಕನ ತತ್ವ, ಆದರ್ಶಗಳು ಈ ಜಗತ್ತಿನಲ್ಲಿ ಸೂರ್ಯ, ಚಂದ್ರನಿರುವವರೆಗೂ ಶಾಶ್ವತವಾಗಿರಲಿ ಎಂದು ಹಾರೈಸಿ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಉದ್ದೇಶವನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸೇರಿದ ಪಕ್ಷದ ಎಲ್ಲಾ ಕಾರ್ಯಕರ್ತರು ಡಾ|| ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಭೆಯಲ್ಲಿ ರಾಜ್ಯ ಕಾಂಗ್ರೇಸ್ ಮೀನುಗಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಜೀತ್ ತಾಂಡೇಲ್, ಕಾಂಗ್ರೇಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಯಾಸ್, ಯುವ ಕಾಂಗ್ರೇಸ್ನ ಗಯೂರ್ ಸಾಬ್, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಮಹಿಳಾ ಕಾಂಗ್ರೇಸ್ನ ಉಮಾ ಮೇಸ್ತ, ತುಳಸಿ ಗೌಡ, ಪಕ್ಷದ ಮುಖಂಡರಾದ ವಿನಾಯಕ್ ಶೇಟ್, ದಾಮೋದರ ನಾಯ್ಕ, ಬ್ರಾಝೀಲ್ ಪಿಂಟೋ, ಗಂಪಾ ಮೇಸ್ತ, ಮೋಹನ ಮೇಸ್ತ, ಸುರೇಶ ರುಕ್ಕು, ನೆಲ್ಸನ್ ರೋಡ್ರಿಗೀಸ್, ಪಟ್ಟಣ ಪಂಚಾಯತ್ ಸದಸ್ಯ ಸುರೇಶ ಮೇಸ್ತ, ಮಂಜುನಾಥ ಖಾರ್ವಿ, ಗಜು ನಾಯ್ಕ, ಶ್ರೀಕಾಂತ ಮೇಸ್ತ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.
ಹೊನ್ನಾವರ ತಾಲೂಕಾ ಕಾಂಗ್ರೇಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸೋಮಯ್ಯ ಮುಕ್ರಿ ಎಲ್ಲರನ್ನು ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷ ಕೃಷ್ಣ ಹರಿಜನ ವಂದಿಸಿದರು.
Leave a Comment