ಹೊನ್ನಾವರ :
ಬಿಜೆಪಿಯ ಭಟ್ಕಳ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಗೊಂಡ ಯುವ ಮುಖಂಡ ಸುನೀಲ್ ಬಿ. ನಾಯ್ಕ ಟಿಕೇಟ್ ಘೋಷಣೆಯಾದ ಹಿನ್ನಲೆಯಲ್ಲಿ ವಿಘ್ನನಿವಾರಕನಾದ ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಯುವ ಕಾರ್ಯಕರ್ತರೊಂದಿಗೆ ಕ್ಷೇತ್ರದ ಹಲವು ಭಾಗಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ಸುನೀಲ್ ನಾಯ್ಕ ಮಾತನಾಡಿ ಭಾರತೀಯ ಜನತಾ ಪಕ್ಷ ಬಹುದೊಡ್ಡ ಜವಾಬ್ದಾರಿಯಾದ ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಈ ದಿನ ಇಡಗುಂಜಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಇಂದಿನಿಂದಲೆ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ. ಪಕ್ಷದ ಎಲ್ಲಾ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಈ ಬಾರಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ.
ಈ ಬಾರಿಯ ಚುನಾವಣೆಗೆ ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಹಾಗೂ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪನವರು ಮಾಡಿದ ಸಾಧನೆ ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ಜನಪರ ಕಾಳಜಿ ಹಾಗೂ ಹಿಂದುತ್ವದ ನಿಲುವನ್ನು ಪ್ರತಿ ಮನೆಮನೆಗೆ ತಲುಪಿಸಿ ಕ್ಷೇತ್ರದಲ್ಲಿ ಪಕ್ಷವನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲುವುದು ಶತಸಿದ್ದ ಎಂದರು..
ಹಿರಿಯ ಮುಖಂಡರು ಹಾಗೂ ಬಳ್ಕೂರು ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ ಮಾತನಾಡಿ ಭಾರತೀಯ ಜನತಾ ಪಾರ್ಟಿ ಒಬ್ಬ ನಿಷ್ಟಾವಂತ ಕಾರ್ಯಕರ್ತ ಹಾಗೂ ಯುವನಾಯಕ ಸುನೀಲ ನಾಯ್ಕ ಇವರನ್ನು ಕಣಕ್ಕಿಳಿಸಿದೆ. ನರೇಂದ್ರ ಮೋದಿಯವರ ಕನಸು ನನಸು ಮಾಡಲು ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ವಿವಿಧ ಯೋಜನೆಯನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಚುನಾವಣೆಯನ್ನು ಎದುರಿಸಬೇಕಾಗಿದೆ. ಭಟ್ಕಳ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲು ಕಾರ್ಯಕರ್ತರ ಶ್ರಮ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಉಪಾಧ್ಯಕ್ಷ ಗಣಪತಿ ನಾಯ್ಕ ಬಿ.ಟಿ, ಬಳ್ಕೂರ ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಶಂಭು ಬೈಲಾರ್, ಇಡಗುಂಜಿ ಗ್ರಾಮ ಪಂಚಾಯತ ಸದಸ್ಯೆ ರಾಧಾ ನಾಯ್ಕ, ಮುಖಂಡರಾದ ಕೆ.ಜಿ.ಕರಿಮಣಿ, ನರಸಿಂಹ ನಾಯ್ಕ, ಎಮ್.ಎನ್.ನಾಯ್ಕ, ಎಮ್.ಎಮ್.ನಾಯ್ಕ, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment