ಹಳಿಯಾಳ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಡಿ ಸ್ಥಳಿಯ ಹಿರಿಯ ಹಾಗೂ ಕಿರಿಯ ಶ್ರೇಣಿ ನ್ಯಾಯಾಲದಲ್ಲಿ ದಾಖಲಾದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 25 ಪ್ರಕರಣಗಳನ್ನು ನ್ಯಾಯಾಧೀಶ ಶಿಲ್ಪಾ ಎಚ್ ಎ ಹಾಗೂ ನ್ಯಾಯಾಧೀಶ ಬಸವರಾಜ ಸನದಿ ರವರು ರಾಜಿಸಂದಾನದ ಮೂಲಕ ಇತ್ಯರ್ಥ ಪಡಿಸಿದರು. ಭಾನುವಾರ ನಡೆದ ಲೋಕ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶ ಶಿಲ್ಪಾ ಎಚ್ ಎ ಮಾತನಾಡಿ ಕಕ್ಷಿದಾರರು ನ್ಯಾಯಾಲದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಬಗೆ ಹರಿಸಿಕೊಂಡರೇ ತಮ್ಮ ಸಮಯ, ಹಣ ಉಳಿಸಿ ಪರಸ್ಪರ ಒಬ್ಬರಿಗೊಬ್ಬರು ಸಹಭಾಳ್ವೆಯಿಂದ ಉಳಿಯಲು ಸಾಧ್ಯವೆಂದರು. ನ್ಯಾಯಾಧೀಶ ಬಸವರಾಜ ಸನದಿ ಮಾತನಾಡಿ ನ್ಯಾಯಾಲಯದಲ್ಲಿ ಉಭಯ ಕಕ್ಷಿದಾರರು ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಲು ಮುಂದಾರೇ ಪ್ರತಿದಿನವೂ ಸಹ ರಾಜಿಸಂಧಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲಾಗವುದು. ಆ ನಿಟ್ಟಿನಲ್ಲಿ ಕಕ್ಷಿದಾರರು ಹಾಗೂ ವಕೀಲರು ಪ್ರಕರಣ ಇತ್ಯರ್ಥಗೊಳಿಸಲು ಸಹಕಾರಿಯಾಗಬೇಕು. ಕಾನೂನು ಸಾಕ್ಷರತೆಯಿಂದಾಗಿ ಜನಸಾಮಾನ್ಯರು ಸಂವಿಧಾನ ಹಾಗೂ ಇತರ ಶಾಸನಗಳು ತಮಗೆ ಕೊಡಮಾಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಮರ್ಥರಾಗುತ್ತಾರೆ ಎಂದರು. ನಂತರ ನಡೆದ ಲೋಕ ಅದಾಲತ್ ನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಸಿವಿಲ್ ಸ್ವರೂಪದ 8 ವ್ಯಾಜ್ಯಗಳನ್ನು ಹಾಗು ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಕ್ರಿಮಿನಲ್ 14, ಸಿವಿಲ್ 3 ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ಸಂಧಾನೇತರಕಾರರಾಗಿ ವಕೀಲ ಎಸ್.ಎಲ್.ಸೋಮಣ್ಣವರ ಕಾರ್ಯನಿರ್ವಹಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಅಜೀತ ಜನಗೌಡಾ, ವಕೀಲ ಸಂಘದ ಎಲ್ಲ ಸದಸ್ಯರು ಇದ್ದರು.
Leave a Comment