ಹಳಿಯಾಳ:- ಕಾಂಗ್ರೇಸ್ ಪಕ್ಷದಲ್ಲಿದ್ದುಕೊಂಡು ಅಧಿಕಾರ ಪಡೆದು ಎಲ್ಲ ಸವಲತ್ತು ಅನುಭವಿಸಿ ಈಗ ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಿರುವ ಮಿನುಗಾರಿಕಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ವಿಶ್ವಾಸ ಹಾಗೂ ಪಕ್ಷ ದ್ರೋಹ ಎಸಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಆರೋಪಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮೂಲತಃ ಕಾಂಗ್ರೇಸ್ಸಿಂದ ರಾಜಕೀಯ ಮುಖಂಡರಾಗಿ ಬೆಳೆದು ಅಧಿಕಾರ ಅನುಭವಿಸಿದ ರಾಜೇಂದ್ರ ನಾಯ್ಕ ಹಾಗೂ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡಾ ತಮ್ಮನ್ನು ತಾವೇ ಮಾರಿಕೊಂಡು ಪಕ್ಷ ತ್ಯಜಿಸಿ ಇನ್ನೊಂದು ಪಕ್ಷ ಸೇರಿ ಪಕ್ಷದ್ರೋಹ ಎಸಗಿದ್ದು ಇಂತಹವರು ಯಾವುದೇ ಪಕ್ಷದಲ್ಲಿ ಇರಬಾರದು ಎಂದು ಕಿಡಿಕಾರಿದರು. ಕಾಂಗ್ರೇಸ್ ಪಕ್ಷ ಸಮುದ್ರವಿದ್ದಂತೆ ಇಲ್ಲಿ ಯಾರು ಪಕ್ಷ ಬಿಟ್ಟು ಹೋದರು ಪಕ್ಷದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದ ಘೊಟ್ನೇಕರ ಪಕ್ಷದ ಹೈಕಮಾಂಡ ಪಕ್ಷದಲ್ಲಿ ಹುದ್ದೇ ನೀಡುವಾಗ ನಿಷ್ಠಾವಂತ, ಯೋಗ್ಯ, ಪ್ರಾಮಾಣಿಕ ವ್ಯಕ್ತಿಗೆ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಬಲಿಷ್ಠವಾಗಿದ್ದು 6 ಕ್ಷೇತ್ರಗಳಲ್ಲಿ ಕಾಂಗೈ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇನ್ನೂ ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿಯ ಮುಖಂಡರ ನಡವಳಿಕೆ, ಅವರಲ್ಲಿನ ಆಂತರಿಕ ಒಳಜಗಳ, ಭಿನ್ನಮತದಿಂದ ಬೇಸತ್ತಿರುವ ನೂರಾರು ಮುಖಂಡರು, ಕಾರ್ಯಕರ್ತರು ತಮ್ಮ ನೇತೃತ್ವದಲ್ಲಿ ಪ್ರತಿದಿನ ಸೇರ್ಪಡೆಯಾಗುತ್ತಿದ್ದು ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಬೇರು ಘಟ್ಟಿಯಾಗುತ್ತಿದ್ದು 8ನೇ ಬಾರಿ ಸ್ಪರ್ದಿಸಿರುವ ಸಚಿವ ದೇಶಪಾಂಡೆ ಪ್ರಚಂದ ಬಹುಮತದಿಂದ ಆಯ್ಕೆಯಾಗುವುದು ಶತಸಿದ್ದ ಎಂದು ಘೊಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೀರಲಗಾ, ಕೇಸರೊಳ್ಳಿ ಗ್ರಾಮಗಳಿಂದ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಇನ್ನಿತರ ಸಮುದಾಯದ 80ಕ್ಕೂ ಹೆಚ್ಚು ವಿವಿಧ ಪಕ್ಷಗಳ ಕಾರ್ಯಕರ್ತರು ವಿ.ಪ.ಸದಸ್ಯ ಘೋಟ್ನೇಕರ ಸಮ್ಮುಖದಲ್ಲಿ ಕಾಂಗ್ರೇಸ್ ಸೇರಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಮುಖಂಡರಾದ ಶಿವಪುತ್ರಪ್ಪಾ ನುಚ್ಚಂಬ್ಲಿ, ಬಾಬು ಮಿರಾಶಿ, ಸತ್ಯಜೀತ ಗಿರಿ, ಅನಿಲ ಸಂಜಯ ಪಾಟೀಲ ಇದ್ದರು.
Leave a Comment