ಹಳಿಯಾಳ:- ಕಾಂಗ್ರೇಸ್ನಲ್ಲಿಯ ಕೆಲವು ಮುಸ್ಲಿಂ ಮುಖಂಡರು ಮುಸ್ಲಿಂ ಜನತೆ ಕಾಂಗ್ರೇಸ್ ಪಕ್ಷವನ್ನೇ ಬೆಂಬಲಿಸಿ ಅಭ್ಯರ್ಥಿಗೆ ಮತ ಹಾಕಬೇಕೆಂದು ಹೇಳಿರುವುದು ಖಂಡನಾರ್ಹವಾಗಿದ್ದು ಇದು ಕಾನೂನಿಗೆ ವಿರುದ್ದವಾಗಿದೆ ಎಂದು ಜೆಡಿಎಸ್ ಮಾಜಿ ತಾಲೂಕಾಧ್ಯಕ್ಷ ಕೈತಾನ ಬಾರಬೋಬಾ ಹೇಳಿದರು. ಪಟ್ಟಣದ ರಾಮದೇವ ಗಲ್ಲಿಯಲ್ಲಿರುವ ಜೆಡಿಎಸ್ ಬಂಡಾಯ, ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರ ಕಾರ್ಯಾಲಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಬಾರಿ ಚುನಾವಣೆಯಲ್ಲಿ ಕಾರ್ಯಕರ್ತರಿಗೆ, ಮುಖಂಡರಿಗೆ, ಮಹತ್ವ ಬಂದಿದೆ ಎಂದ ಅವರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಟ್ರಾಕ್ಟರ್ ಓಡಿಸುತ್ತಿರುವ ರೈತ ಚಿಹ್ನೆ ಹೊಂದಿರುವ ಅಭ್ಯರ್ಥಿ ಚಂದ್ರಶೇಖರ ಅವರಿಗೆ ಉತ್ತಮ ಬೆಂಬಲ ದೊರೆಯುತ್ತಿದ್ದು ಗೆಲುವು ಸಾಧಿಸಲಿದ್ದಾರೆಂದರು. ಇನ್ನೂ ಸಚಿವ ದೇಶಪಾಂಡೆ ಅವರು ಹೇಳುತ್ತಿರುವ ಹಳಿಯಾಳ ಕಾಳಿನದಿ ನೀರಾವರಿ ಯೋಜನೆ ಸುಳ್ಳಾಗಿದ್ದು ಇದು ಚುನಾವಣೆ ಗಿಮಿಕ್ ಆಗಿದೆ ಎಂದು ಆರೋಪಿಸಿದರು. ಪ್ರಣಾಳಿಕೆಯಲ್ಲಿ ನೀರಾವರಿ ಯೋಜನೆ, ಬಾಂದಾರ ನಿರ್ಮಾಣ, ಕ್ಷೇತ್ರದಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ, ಎಲ್ಲ ವರ್ಗದ ಶ್ರಮಿಕ ಜನರ ಸಾಲ ಮನ್ನಾ, ಕುಣಬಿ ಜನರನ್ನು ಎಸ್ಟಿಗೆ ಹಾಗೂ ಮರಾಠರನ್ನು 2ಎಗೆ ಸೇರಿಸುವುದು, ಶಾಸಕರ ಸೇವಾ ಕೇಂದ್ರ ಆರಂಭಿಸಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ, ವೈದ್ಯರ ನೇಮಕ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೇರಿದಂತೆ ಅನೇಕ ಯೋಜನೆಗಳನ್ನು ಅವರು ತಮ್ಮ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ದಾವಲಸಾಬ ಅಂಗಡಿ, ಅರ್ಜುನ ಗುರುಬಣ್ಣವರ, ನಾಗೇಂದ್ರ ಬೆಳವಡಿ, ತುಕಾರಾಮ ಕರಂಜೆಕರ, ಮೇಘರಾಜ, ನಾರಾಯಣ ಗೌಡಾ, ವಾಲಂತಿ ಸಿದ್ದಿ ಪರಶುರಾಮ ಮೆತ್ರಿ, ಅಣ್ಣಪ್ಪಾ ಕೊರವರ, ಸಂತಾನ ಸಿದ್ದಿ ನಾರಾಯಣ ಮಿರಾಶಿ, ಮಹೇಶ ಜಾಧವ, ಇನುಸ ಪಟೆಲ,ನಿಜಾಮ ಇದ್ದರು.
Leave a Comment