ಹಳಿಯಾಳ:- ಬಿಜೆಪಿ ಪಕ್ಷ ಯಾವುದೇ ಧರ್ಮ, ಜಾತಿ, ನಾಯಕನ ಪಕ್ಷ ಅಲ್ಲ ಇದು ಕಾರ್ಯಕರ್ತರ ಪಕ್ಷವಾಗಿದ್ದು ಕಾರ್ಯಕರ್ತರ ಶ್ರಮದಿಂದಲೇ ಇಂದು ಜಗತ್ತಿನಲ್ಲಿಯೇ ಬಿಜೆಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ಪಕ್ಷ ರಾಷ್ಟ್ರೀಯ ಉಪಾಧ್ಯಕ್ಷ ಓಮಪ್ರಕಾಶ ಮಾಥುರ ಹೇಳಿದರು. ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ಗುರುವಾರ ಸಾಯಂಕಾಲ ಪಟ್ಟಣದ ಬಿಜೆಪಿ ಕಾರ್ಯಾಲಯಕ್ಕೆ ಹಠಾತ್ನೆ ಭೇಟಿ ನೀಡಿದ ಅವರು ಬಿಜೆಪಿ ಕಾರ್ಯಕರ್ತರು, ಬೂತ ಪ್ರಮುಖರು, ಮಂಡಳ ಸಮೀತಿ, ಪೇಜ್ ಪ್ರಮುಖರ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಮಾನದಂಡಗಳು, ಸಲಹೆ ಸೂಚನೆಗಳನ್ನು ನೀಡಿ ಪ್ರತಿ ಬೂತಮಟ್ಟದಲ್ಲಿ ನಿಖರ ಮಾಹಿತಿ ಇಟ್ಟುಕೊಂಡು ಕೆಲಸ ನಿರ್ವಹಿಸುವಂತೆ ಆದೇಶಿಸಿದರು. ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ದೊಡ್ಡ ಶಕ್ತಿಯಾಗಿದ್ದು ಅವರು ಇಚ್ಚಾಶಕ್ತಿ ಹೊಂದಿ ಸಂಕಲ್ಪ ಮಾಡಿ ಜವಾಬ್ದಾರಿ ನೀಡಲಾಗಿರುವ ತಮ್ಮ ಬೂತಗಳನ್ನು ಗೆಲ್ಲಿಸಿದರೇ ಚುನಾವಣೆ ಗೆದ್ದಂತೆ ಅಭ್ಯರ್ಥಿ ಆಯ್ಕೆಯಾದಂತೆ ಎಂದು ಹೇಳಿ ಇದು ಚುನಾವಣೆಯ ಯುದ್ದ ಇದ್ದಂತೆ ಇದಕ್ಕೆ ಸೈನಿಕರಂತೆ ಚಾಣಾಕ್ಷತನದಿಂದ ಕೆಲಸ ನಿರ್ವಹಿಸಿ ವಿರೋಧಿಗಳಿಂದಲೂ ಮತ ಪಡೆಯುವ ಕಾರ್ಯ ಮಾಡಿ ಇರುವ 8ದಿನಗಳನ್ನು ಪಕ್ಷದ ಗೆಲುವಿಗಾಗಿ ಸಮರ್ಪಿಸುವಂತೆ ಕರೆ ನೀಡಿದರು. ನಾನೊಬ್ಬ ಸೇವಕ, ದೇಶಕ್ಕಾಗಿ ನಾನು ನನ್ನನ್ನು ಸಮರ್ಪಿಸಿಕೊಂಡಿದ್ದು ನನ್ನ ಸದುಪಯೋಗ ಪಡೆಯಿರಿ ಎಂದು ಹೇಳುವ ಅದ್ಬೂತ ಸರಳ ಸಜ್ಜನಿಕೆಯ ಹಾಗೂ ಇತಿಹಾಸದಲ್ಲೇ ಭ್ರಷ್ಟಾಚಾರ, ಸ್ವಜನಪಕ್ಷಪಾತವಿಲ್ಲದ ಪ್ರಾಮಾಣಿಕ ಶ್ರಮಿಕ ಪ್ರಧಾನಮಂತ್ರಿಯನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದ್ದು ನಾವೆಲ್ಲರೂ ಕಾರ್ಯಕರ್ತರು ಎನ್ನುವ ಭಾವನೆ ಹೊಂದಿ ಕಾರ್ಯನಿರ್ವಹಿಸಿ ಬಿಜೆಪಿ ಪಕ್ಷ ಗೆಲುವಿಗೆ ಶ್ರಮಿಸಬೇಕೆಂದರು. ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ:- ಈ ಸಂದರ್ಭದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಪಕ್ಷ ಸರ್ಕಾರ ರಚಿಸುತ್ತದೆ ಎಂದು ಭವಿಷ್ಯ ನುಡಿದ ಅವರು ನನಗೆ ಕರಾವಳಿ ಭಾಗದ 21 ವಿಧಾನ ಸಭಾ ಕ್ಷೇತ್ರಗಳ ಜವಾಬ್ದಾರಿ ಕೊಟ್ಟಿದ್ದು ಕಳೆದ 15 ದಿನಗಳಿಂದ ಈ ಭಾಗದಲ್ಲಿ ಬಿಡುಬಿಟ್ಟಿದ್ದು ಎಲ್ಲೆಡೆ ಸಂಚರಿಸಿ ಕಾರ್ಯಕರ್ತರು, ಬೂತಮಟ್ಟದ ಪ್ರಮುಖರ ಕಾರ್ಯ ಪರಿಶೀಲಿಸಿ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದರು. ಇನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತಮ ಸ್ಪಂದನೆ ಇರುವುದು ತಿಳಿದಿದ್ದು 6 ಕ್ಷೇತ್ರಗಳನ್ನು ಗೆಲ್ಲಲಾಗುವುದು ಹಳಿಯಾಳದ ಅಭ್ಯರ್ಥಿ ಸುನೀಲ್ ಹೆಗಡೆ ಉತ್ತಮ ಜನಬೆಂಬಲ ಹೊಂದಿದ್ದು ಹೆಚ್ಚಿನ ಮತಗಳ ಅಂತರದಿಂದ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲಿದ್ದಾರೆಂದರು. ಈ ಸಂದರ್ಭದಲ್ಲಿ ಅವರೊಂದಿಗೆ ಆಸ್ಸಾಂನ ಬಿಜೆಪಿ ಪ್ರಮುಖ ವಿಜಯ ಗುಪ್ತಾ, ಹಳಿಯಾಳ ಅಧ್ಯಕ್ಷ ಶಿವಾಜಿ ನರಸಾನಿ, ಬಸವರಾಜ ಕಳಶೆಟ್ಟಿ, ತುಕಾರಾಮ ಮಾಂಜ್ರೇಕರ, ಎನ್.ಎಸ್.ಹೆಗಡೆ, ವಿಲಾಸ ಯಡವಿ, ವಿಎಮ್ ಪಾಟೀಲ್, ಅನಿಲ ಮುತ್ನಾಳ, ವಾಸುದೇವ ಪೂಜಾರಿ ಸೇರಿದಂತೆ ಪ್ರಮುಖರು ಇದ್ದರು.
Leave a Comment