ಹೊನ್ನಾವರ: ಸರ್ವೇಜನಃ ಸುಖಿನೋ ಭವಂತು ಎನ್ನುವುದು ಕಾಂಗ್ರೆಸ್ ಸಿದ್ಧಾಂತ. ಆದರೆ ಸಮಾಜದಲ್ಲಿ ಕೋಮುವಾದದ ಸಂಶಯದ ಬೀಜ ಬಿತ್ತಿ ಬಿಜೆಪಿ ಪಕ್ಷ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಅಂತವರನ್ನು ಅಧಿಕಾರದಿಂದ ದೂರವಿಡಿ ಎಂದು ಸಚಿವ ಆರ್.ವಿ. ದೇಶಪಾಂಡೆ ಮತದಾರರಿಗೆ ಕರೆ ನೀಡಿದರು.
ಅವರು ತಾಲೂಕಿನ ಕೊಳಗದ್ದೆಯಲ್ಲಿ ಶ್ರೀ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಭಟ್ಕಳ ಕ್ಷೇತ್ರದ ಅಭ್ಯರ್ಥಿ ಮಂಕಾಳು ವೈದ್ಯ ಪರ ಚುನಾವಣಾ ಭಾಷಣ ಮಾಡಿದರು.
ಕಾಂಗ್ರೆಸ್ ಸಮಾಜದ ಎಲ್ಲರನ್ನೂ ಒಂದಾಗಿಸಿ ಕರೆದೊಯ್ಯುವ ಪಕ್ಷವಾದ್ದರಿಂದ ಕರ್ನಾಟಕ ರಾಜ್ಯ ಶಿಕ್ಷಣದಲ್ಲಿ, ಕೈಗಾರಿಕೆಯಲ್ಲಿ, ಕೃಷಿ ಹಾಗೂ ಮಾಹಿತಿ ಹಕ್ಕು ಕ್ಷೇತ್ರದಲ್ಲಿ ದೇಶದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಯಿತು. ನಮ್ಮ ರಾಜ್ಯದ ಸೌಹಾರ್ಧಯುತ ವಾತಾವರಣದಿಂದಾಗಿ ಹಲವಾರು ಕೈಗಾರಿಕೆಗಳು ಸ್ಥಾಪಿತವಾಯಿತು. ಆರ್ಥಿಕ ಪ್ರಗತಿಗೆ ಕಾರಣವಾಯಿತು. ಸಮಾಜದಲ್ಲಿ ಉದ್ವಿಗ್ನ ವಾತಾವರಣ ಇದ್ದರೆ, ಸೌಹಾರ್ಧತೆ ಇಲ್ಲದೇ ಇದ್ದರೆ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ದೇಶದ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗಲು ಕೇಂದ್ರ ಸರ್ಕಾರದ ನೀತಿಯೇ ಕಾರಣ. ಕೃಷಿಕರನ್ನು ಉದ್ಧರಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಆರೋಪಿಸಿದರು. ಕ್ಷೇತ್ರದ ಅಭ್ಯರ್ಥಿ ಮಂಕಾಳು ವೈದ್ಯ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ವ್ಯಕ್ತಿತ್ವದವರು. ಕ್ಷೇತ್ರದ ಅಭಿವೃದ್ಧಿಗೆ ಅತೀ ಹೆಚ್ಚು ಕಾಮಗಾರಿಯನ್ನು ತಂದವರು. ಕ್ಷೇತ್ರದ ಅಭಿವೃದ್ಧಿಯ ಕಾಳಜಿಯುಳ್ಳ ಮಂಕಾಳು ವೈದ್ಯರಿಗೆ ಮತ ಕೊಟ್ಟು ಆರಿಸಿ ತಂದು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಕೋರಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಆರ್.ಎನ್. ನಾಯಕ ಮಾತನಾಡಿ ಶಾಸಕ ಮಂಕಾಳು ವೈದ್ಯ ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವವರು. ಆದ್ದರಿಂದ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಗತಿಪರ ಕಾರ್ಯಗಳು ಸಾಧ್ಯವಾಗಿದೆ. ಕೆಲಸ ಮಾಡುವ ಮಂಕಾಳು ವೈದ್ಯರನ್ನು ಗೆಲ್ಲಿಸಿ ಎಂದು ವಿನಂತಿಸಿದರು.
ಶಾಸಕ ಮಂಕಾಳು ವೈದ್ಯ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ಭಟ್ಕಳ ಪ್ರಚಾರ ಸಮಿತಿ ಅಧ್ಯಕ್ಷ ಯೋಗೇಶ ರಾಯ್ಕರ್, ಚಂದ್ರಕಾಂತ ಕೊಚರೇಕರ್, ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ, ಸವಿತಾ ಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಜಿ.ಜಿ. ಶಂಕರ, ಕಾಂಗ್ರೆಸ್ ಮುಖಂಡ ಬಾಲಚಂದ್ರ ನಾಯ್ಕ, ಗೋವಿಂದ ನಾಯ್ಕ ಗೇರಸೊಪ್ಪ ಇನ್ನೀತರರು ಉಪಸ್ಥಿತರಿದ್ದರು.
ಮಂಕಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಗೌಡ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಲ್ಕಿ ಇಬ್ರಾಹಿಂ ಸಾಬ್, ಮಂಕಿ ರಾಜು ನಾಯ್ಕ, ರಾಮು ಗೌಡ ಖರ್ವಾ, ಪಾತಿಮಾ ಮಾವಿನಕುರ್ವಾ ನೇತೃತ್ವದಲ್ಲಿ ನೂರಾರು ಜೆ.ಡಿ.ಎಸ್. ಮುಖಂಡರನ್ನು ಸಚಿವ ದೇಶಪಾಂಡೆ ಕಾಂಗ್ರೆಸ್ ಪಕ್ಷಕ್ಕೆ ಭರಮಾಡಿಕೊಂಡರು.
Leave a Comment