ಹಳಿಯಾಳ:- ಹಳಿಯಾಳ-ಜೋಯಿಡಾ ಮತಕ್ಷೇತ್ರದಲ್ಲಿ ಒಟ್ಟೂ 215 ಮತಗಟ್ಟೆಗಳನ್ನು ತೆರೆಯಲಾಗಿದ್ದು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 1190 ಸಿಬ್ಬಂದಿಗಳು ಚುನಾವರ್ಣಾ ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದು ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಶುಕ್ರವಾರ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 87147 ಪುರುಷರು ಹಾಗೂ 84697 ಮಹಿಳಾ ಮತದಾರರಿದ್ದಾರೆ. ಹಳಿಯಾಳ ಭಾಗದಲ್ಲಿ 1,29,268 ರಲ್ಲಿ ಪುರುಷರು 65846 ಹಾಗೂ ಮಹಿಳೆಯರು 63421 ಮತದಾರರಿದ್ದು ಜೋಯಿಡಾದಲ್ಲಿ 42578 ಒಟ್ಟೂ ಮತದಾರರಲ್ಲಿ ಪುರುಷರು 21301, ಮಹಿಳೆಯರು 21276 ಇದ್ದು 2 ತಾಲೂಕಿನಲ್ಲಿ ಇತರೆ 3 ಹಾಗೂ ಒಟ್ಟೂ 1405 ಅಂಗವಿಕಲ ಮತದಾರರನ್ನು ಗುರತಿಸಲಾಗಿದೆ ಎಂದು ತಿಳಿಸಿದರು. ಮತಗಟ್ಟೆಗಳ 100ಮೀ ಅಂತರದಲ್ಲಿ ಕಲಂ 144 ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆಂದು ಅವರು ತಿಳಿಸಿದರು. ಹಳಿಯಾಳ ಹಾಗೂ ಜೋಯಿಡಾ ತಾಲೂಕಿನಲ್ಲಿ ತಲಾ ಒಂದು ಸಖಿ ಮತಗಟ್ಟೆ ಹಾಗೂ ಅಂಗವಿಕಲರಿಗಾಗಿ ವಿಶೇಷ ಪಿಡಬ್ಲೂಡಿ ಮತಗಟ್ಟೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ ಅವರು ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದ್ದು ಮತಗಟ್ಟೆ ಪೂರ್ತಿ ಗುಲಾಬಿ ಬಣ್ಣ ಬಳಿಯಲಾಗಿದೆ. ಈ ಮತಗಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು ಜತೆಗೆ ಗುಲಾಬಿ ಬಣ್ಣದ ಸಮವಸ್ತ್ರ ಧರಿಸುವರು. ಅಲ್ಲದೇ ಮಹಿಳಾ ಪೋಲಿಸ್ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಲಿದ್ದು ಮತಗಟ್ಟೆಯ ಮುಂದೆ ಮತದಾನಕ್ಕೆ ಸರದಿ ಸಾಲಿನಲ್ಲಿ ನಿಲ್ಲಲು ಗುಲಾಬಿ ಬಣ್ಣದ ಪೆಂಡಾಲ್ ಹಾಕಲಾಗಿದೆ. ಇಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಲಾಗಿದೆ ಎಂದು ಭಜಂತ್ರಿ ಹೇಳಿದರು. ತಾಲೂಕಿನ ಬಿದ್ರೋಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 107ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗವಿಕಲರಿಗಾಗಿ ವಿಶೇಷ ಪಿಡಬ್ಲೂಡಿ ಮತಗಟ್ಟೆ ಸ್ಥಾಪಿಸಲಾಗಿದ್ದು ಇದು ನೀಲಿಮಯವಾಗಿದೆ. ಅಲ್ಲಿಯೂ ಸಹ ಮತಗಟ್ಟೆ ಆವರಣದಲ್ಲಿ ನೀಲಿ ಬಣ್ಣದ ಪೆಂಡಾಲ್ ಹಾಕಲಾಗಿದ್ದು ಮತಗಟ್ಟೆಗೆ ಬರುವ ಅಂಗವಿಕಲರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಹಾಗೂ ಸಹಾಯ ಕೇಂದ್ರ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು. ಇನ್ನೂ ಕ್ಷೇತ್ರದಲ್ಲಿ 5 ಕ್ರಿಟಿಕಲ್, 10 ವಲರೆಬಲ್, 33 ಅತಿಸೂಕ್ಷ್ಮ, 16 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಕ್ರಿಟಿಕಲ್ ಮತ್ತು ವಲರೆಬಲ್ ಇರುವ ಕಡೆ ವಿಡಿಯೋಗ್ರಾಫಿ ಹಾಗೂ 21 ಕಡೆ ಡೈರೆಕ್ಟ್ ವೆಬ್ ಕಾಸ್ಟಿಂಗ್ ಲೈವ್ ಇರಲಿದ್ದು 40 ಮೈಕ್ರೋ ಒಬಸರ್ವರ್ಗಳು ಕಾರ್ಯನಿರ್ವಹಿಸಲಿದ್ದು ತೀರಾ ಒಳಗೆ ಇರುವ ಸಂವಹನ ಸಾಧ್ಯವಾಗದ ಪ್ರದೇಶಗಳಿಗೆ ವಾಕಿಟಾಕಿ ಹಾಗೂ 7 ಜನ ರನ್ನರಗಳು ನಿರಂತರ ಕಾರ್ಯನಿರ್ವಹಿಸಲಿದ್ದು ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ ಎಂದು ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಪತ್ರಿಕೆಗೆ ತಿಳಿಸಿದರು.
Leave a Comment