ಹಳಿಯಾಳ:- ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೇಸ್ ಜೆಡಿಎಸ್ ಸರ್ಕಾರವು ಅಪವಿತ್ರ ಮೈತ್ರಿಯಾಗಿದ್ದು ಇದು ಬಹಳದಿನ ಬಾಳಿಕೆ ಬರದೆ ಮುಂದಿನ ಕೆಲವೇ ತಿಂಗಳುಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮತ್ತೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಗುರುವಾರ ಮುಂಜಾನೆ ಪಟ್ಟಣದಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿ ರಾಜ್ಯ ಘಟಕದ ಕರೆ ಹಿನ್ನೆಲೆ ಜೆಡಿಎಸ್ ಕಾಂಗ್ರೇಸ್ ಮೈತ್ರಿ ಸರ್ಕಾರದ ರಚನೆಯನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಮೂಲಕ ಕರಾಳ ದಿನವನ್ನಾಗಿ ಆಚರಿಸಿ ಮಾತನಾಡಿದ ಅವರು ಚುನಾವಣೆಯ ಸಮಯದಲ್ಲಿ ಶತ್ರುಗಳಾಗಿದ್ದವರು ಅಧಿಕಾರದ ಆಸೆಗಾಗಿ ಇಂದು ತಮ್ಮ ಎಲ್ಲಾ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿದೆ ಎಂದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಬಲಿಷ್ಠ ವಿರೋಧ ಪಕ್ಷದಲ್ಲಿ ಕುಳಿತು ಪ್ರಾಮಾಣಿಕವಾಗಿ ಹಾಗೂ ರಾಜ್ಯದ ಜನತೆಯ ಹಿತದೃಷ್ಠಿಯ ಪರವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲಿದೆ ಮತ್ತೇ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಹೋರಾಟಗಾರ ಬಿಎಸ್ ಯಡ್ಯೂರಪ್ಪ ಮತ್ತೇ ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ ಎಂದು ಸಾರಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ಮುಖಂಡರಾದ ವಿಎಮ್ ಪಾಟೀಲ್, ಅನಿಲ ಮುತ್ನಾಳ್, ವಿಲಾಸ ಯಡವಿ, ಎಸ್.ಎಶೆಟವಣ್ಣವರ, ತಾನಾಜಿ, ತುಕಾರಾಮ ಪಟ್ಟೇಕರ, ಅಪ್ಪು ಚರಂತಿಮಠ, ವಾಸು ಪೂಜಾರಿ, ಸಂತೋಷ ಘಟಕಾಂಬಳೆ, ವಿಜಯ ಬೋಬಾಟಿ, ಸಂತಾನ ಸಾವಂತ, ಸಿದ್ದು ಶೆಟ್ಟಿ, ರಾಕೇಶ, ಪ್ರದೀಪ ಹಿರೆಕರ, ನಾಗರಾಜ, ಅನಿಲ ಗಿರಿ, ರಾಘವೇಂದ್ರ ಚಲವಾದಿ ಮೊದಲಾದವರು ಇದ್ದರು.
Leave a Comment