ಹೊನ್ನಾವರ : ಐತಿಹಾಸಿಕ ಸ್ಮಾರಕವುಳ್ಳ ಪಟ್ಟಣ ವ್ಯಾಪ್ತಿಯ ಕರ್ನಲ್ ಹಿಲ್ ಸಮೀಪದ ಗುಡ್ಡ ಮತ್ತೆ ಕುಸಿಯಲಾರಂಭಿಸಿದೆ. ಗುಡ್ಡದ ಮೇಲ್ಭಾಗದ ಮನೆಗಳಿಗೆ ಅಪಾಯ ಎದುರಾಗಿದೆ. ಇದರಿಂದ ಮೇಲ್ಭಾಗದಲ್ಲಿರುವ ಕನಿಷ್ಠ ಮೂರು ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ.
ಉಪವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಹಾಗೂ ತಹಶೀಲ್ದಾರ ಮಂಜುಳಾ ಭಜಂತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
`ಕರ್ನಲ್ ಹಿಲ್ ಸಮೀಪ ಮತ್ತಷ್ಟು ಗುಡ್ಡ ಕುಸಿದರೆ ಮೇಲ್ಭಾಗದ ಮನೆಗಳಿಗೆ ಅಪಾಯ ಆಗಬಹುದು. ಮುಂದಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಧಕ್ಕೆಯಾಗುವ ಸಾಧ್ಯತೆಯಿದೆ. ಗುಡ್ಡದ ಕೆಳಗೆ ಹೊಂದಿಕೊಂಡಿರುವ ಜಾಗದ ಮಾಲೀಕರಾದ ಗೀತಾ ಸಾಂತೋಲಿನ್ ಫರ್ನಾಂಡಿಸ್ ಎಂಬವರಿಗೆ ನೋಟಿಸ್ ನೀಡಲಾಗಿದೆ. ಗುಡ್ಡಕ್ಕೆ ಪಿಚಿಂಗ್ ಕಟ್ಟುವ ಕಾಮಗಾರಿಯನ್ನು ಕೂಡಲೇ ಮುಗಿಸುವಂತೆ ಆದೇಶಿಸಲಾಗಿದೆ’ ಎಂದು ತಹಶೀಲ್ದಾರ ಮಂಜುಳಾ ಭಜಂತ್ರಿ ತಿಳಿಸಿದರು.
ಈ ನಡುವೆ ಎರಡು ದಿನಗಳಿಂದ ಮಳೆಯ ತೀವ್ರತೆ ಹೆಚ್ಚಾಗಿದ್ದು ತಾಲೂಕಿನಲ್ಲಿ 38.1 ಮಿ.ಮೀ ಹಾಗೂ ಈ ವರ್ಷ ಇಲ್ಲಿಯವರೆಗೆ ಒಟ್ಟು 769.4 ಮಿ.ಮೀ ಮಳೆ ದಾಖಲಾಗಿದೆ.
Leave a Comment