ಹೊನ್ನಾವರ: ತಾಲೂಕಿನೆಲ್ಲಡೆ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಎಲ್ಲಾ ಪಂಚಾಯತ ಮಟ್ಟದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲು ಪಿ.ಡಿ.ಒ ಗಳಿಗೆ ಸೂಚಿಸಲಾಗಿದೆ. ಶಾಲೆಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಹಾಗೂ ಕರಪತ್ರಗಳ ಮೂಲಕ ಜಾಗ್ರತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಎಂದು ಶಾಸಕ ಸುನೀಲ ನಾಯ್ಕ ತಿಳಿಸಿದರು.
ಅವರು À ತಾಲೂಕಾ ಪಂಚಾಯತ ಕಾರ್ಯಾಲಯದಲ್ಲಿ ತುರ್ತುಸಭೆ ನಡೆಸಿ ಮಾತನಾಡಿದರು. ವಿವಿಧ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ 20ಕ್ಕು ಹೆಚ್ಚು ಜನರು ಡೆಂಗ್ಯೂ ಜ್ವರದಿಂದ ತಾಲೂಕಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಬಗ್ಗೆ ತಾಲೂಕಾ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತ ಧೂರಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಅಧಿಕಾರಿ ಸುರೇಶ ನಾಯ್ಕ, ಯುವಜನ ಸೇವಾ ಅಧಿಕಾರಿ ಸುಧೀಶ ನಾಯ್ಕ ಅವರೊಂದಿಗೆ ಸದ್ಯದ ರೋಗಿಗಳ ಆರೋಗ್ಯ ಸ್ಥಿತಿ ಹಾಗೂ ಮುಂಜಾಗೃತ ಕ್ರಮ ವಹಿಸುವ ಬಗ್ಗೆ ತುರ್ತುಸಭೆ ನಡೆಸಿದರು.
ಈ ಸಂಧರ್ಭದಲ್ಲಿ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ರೋಗಿಗಳ ಆರೋಗ್ಯದಲ್ಲಿ ಚೇತರಿಕೆಗೊಂಡು ಕೆಲವು ರೋಗಿಗಳು ಬಿಡುಗಡೆಗೊಂಡಿದ್ದಾರೆ. ರೋಗಿಗಳಲ್ಲಿ ಬಿಳಿ ರಕ್ತಕಣದ ಸಂಖ್ಯೆ ಇಳಿಮುಖವಾಗಿದ್ದು ಅವರ ರಕ್ತದ ಪರೀಕ್ಷೆ ನಡೆಸಲು ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದೆ. ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಕರಪತ್ರದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕರ ಬಳಿ ವಿವರಿಸಿದರು. ಅತಿಹೆಚ್ಚು ಡೆಂಗ್ಯುನಿಂದ ಬಳಲುತ್ತಿದ್ದ ನಾಲ್ವರು ರೋಗಿಗಳು ಮಣಿಪಾಲ ಕಸ್ತೂರಬಾ ಮತ್ತು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಸಹ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಅಲ್ಲಿನ ವೈದ್ಯರು ನನ್ನ ಸಂಪರ್ಕದಲ್ಲಿದ್ದು ಅವರ ಬಳಿ ಮಾಹಿತಿ ಪಡೆದಿದ್ದೇನೆ ಎಂದು ಶಾಸಕರು ತಿಳಿಸಿದರು. ಸಾರ್ವಜನಿಕರು ಮನೆಯ ಸುತ್ತ-ಮುತ್ತಲಿನ ವಾತಾವರಣವನ್ನು ಸರಿಯಾಗಿಟ್ಟುಕೊಂಡು ಸ್ವಚ್ಚತೆಗೆ ಗಮನಕೊಟ್ಟು ಎಲ್ಲು ಕೊಳಚೆ ನೀರುಗಳು ನಿಲ್ಲದಂತೆ ನೋಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಉಲ್ಲಾಸ ಶಾನಭಾಗ, ಹರಿಪ್ರಸಾದ ಪ್ರಭು, ಗಣಪತಿ ನಾಯ್ಕ ಬಿ.ಟಿ, ಕೇಶವ ನಾಯ್ಕ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment