ಹಳಿಯಾಳ :- ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ ಬಿನ್ ಶೆತ್ಕಿ(ಎನ್ಎ ಆಗದ) ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಕೊಂಡು ಪುರಸಭೆಯ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದು ಈಗ ಬಿನ್ ಶೆತ್ಕಿ ಜಮೀನನ್ನು ಎನ್.ಎ ಮಾಡಿ ಅಕ್ರಮ ಕಟ್ಟಡ ನಿರ್ಮಾಣವನ್ನು ಸಕ್ರಮ ಮಾಡಲು ಹೊರಟಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಹಳಿಯಾಳ ಬಿಜೆಪಿ ಘಟಕದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸಭೆ ಅಧ್ಯಕ್ಷರು ತರಾತುರಿಯಲ್ಲಿ ಸಾಕಷ್ಟು ಎನ್.ಎ ಪ್ರಕರಣಗಳಿಗೆ ಅನುಮತಿ ನೀಡುತ್ತಿರುವುದು ಸಾಕಷ್ಟು ಸಂಶಯಕ್ಕೆ ಎಡೆ ಮಾಡಿದ್ದು ಪಟ್ಟಣದಲ್ಲಿ ಸ್ವಚ್ಛತೆಯ ಹೆಸರಿನಲ್ಲಿ ಹಗಲು ದರೋಡೆ ನಡೆದಿದ್ದು, ಇದರ ತನಿಖೆಯನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು. ಪುರಸಭೆಯಲ್ಲಿನ ಆಡಳಿತ ಮಂಡಳಿಯ ದೃಷ್ಟಿಯಲ್ಲಿ ಅನುದಾನದ ಲೂಟಿಯೇ ಅಭಿವೃದ್ಧಿ ಅಂತಾಗಿದೆ ಎಂದ ಹೆಗಡೆ ಸ್ವಚ್ಛ ಭಾರತ ಅಭಿಯಾನದ ರ್ಯಾಂಕಿಂಗ್ನಲ್ಲಿ ಹಳಿಯಾಳ ಪುರಸಭೆ ಹಿಂದುಳಿದಿದ್ದರೂ, ಭ್ರಷ್ಟಾಚಾರದ ರ್ಯಾಂಕಿಂಗ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಲಂಚ ನೀಡದೇ ಇಲ್ಲಿ ಯಾವುದೇ ಕೆಲಸವಾಗುವುದಿಲ್ಲ ಹಾಗೂ ಫೈಲ್ ಮುಂದೇ ಹೋಗುವುದಿಲ್ಲ ಬಡವರು ಮದ್ಯಮ ವರ್ಗದವರಿಂದು ಪುರಸಭೆಗೆ ಕಾಲಿಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ ಎಂದು ಸುನೀಲ ಹೆಗಡೆ ಆತಂಕ ವ್ಯಕ್ತಪಡಿಸಿದರು. ಹಳಿಯಾಳ ಪುರಸಭೆಯಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಚಿವ ದೇಶಪಾಂಡೆ ಪ್ರಾಮಾಣಿಕ ಕಾಳಜಿ ತೋರಿಸಬೇಕು. ಹಳಿಯಾಳ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಹಾಗೂ ಪುರಸಭೆಯನ್ನು ಭ್ರಷ್ಟಾಚಾರ ಮುಕ್ತ ಮಾಡುವಲ್ಲಿ ಅವರು ಕೈಗೊಳ್ಳುವ ಕಾರ್ಯಕ್ರಮಗಳಿಗೆ ಬಿಜೆಪಿಯು ರಚನಾತ್ಮಕ ಬೆಂಬಲವನ್ನು ನೀಡಲಿದೆ ಎಂದರು. 2013 ಹಾಗೂ ಈಗ ನಡೆದ ಚುನಾವಣೆಯಲ್ಲಿ ಹಳಿಯಾಳ ಮತ್ತು ದಾಂಡೇಲಿಯ ಮತದಾರರು ದೇಶಪಾಂಡೆಯವರಿಗೆ ಬೆಂಬಲಿಸಿ ಗೆಲ್ಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ದೇಶಪಾಂಡೆಯವರು ಹಳಿಯಾಳ ಪಟ್ಟಣ ನೆನಸುವಂತಹ ಯಾವುದೇ ಶಾಸ್ವತ ಯೋಜನೆಗಳನ್ನು ತಂದಿಲ್ಲ. ತಮ್ಮ ಚೇಲಾಗಳ ಹೊಟ್ಟೆ ತುಂಬಿಸುವ ಯೋಜನೆಯನ್ನು ತರುವ ಬದಲು ಹಳಿಯಾಳ ಪಟ್ಟಣ ಅಭಿವೃಧ್ಧಿ ಸ್ವಚ್ಛತೆಯಲ್ಲಿ ನಂಬರ್ ಒನ್ ಮಾಡುವಂತಹ ಯೋಜನೆಗಳನ್ನು ತರಲು ದೇಶಪಾಂಡೆ ತಮ್ಮ ಇಚ್ಚಾಶತ್ತಿ ತೋರ್ಪಡಿಸಬೇಕು ಎಂದರು. ಹಳಿಯಾಳ ಮತ್ತು ದಾಂಡೇಲಿಯಲ್ಲಿ ಇನ್ನೂ ಪರವಾಣಿಗೆಯ ನಿರೀಕ್ಷೆಯಲ್ಲಿರುವ ಬಗರ್ ಹುಕುಂ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಚಿವರು ಮುಂದಾಗಬೇಕು. ಹಳಿಯಾಳ ಪಟ್ಟಣಕ್ಕೆ ಒಳಚರಂಡಿ ಯೋಜನೆಯನ್ನು ಕಾರ್ಯಗತಗೊಳಿಸುವ ಮುನ್ನ ಜನಪ್ರತಿನಿಧಿಗಳ, ಸರ್ವ ಪಕ್ಷದ ಮುಖಂಡರ ಹಾಗೂ ಸಾರ್ವಜನಿಕರ ಸಭೆಯನ್ನು ಕರೆದು ಚರ್ಚಿಸಲಿ ಎಂದರು. ಪಟ್ಟಣದ ಸ್ವಚ್ಛತೆಗೆ ಮಾರಕವಾಗಿ ಬೆಳೆದಿರುವ ಚಿಕನ್ ಅಂಗಡಿ, ಮೀನು ಮಾರಾಟ ಹಾಗೂ ಕುರಿ ಮಾಂಸ ಮಾರಾಟದ ನಿಯಂತ್ರಣಕ್ಕೆ ಹಾಗೂ ಗೋ ವಧಾಲಯ ಮುಚ್ಚುವಂತೆ ಆಗ್ರಹಿಸಿ ಜುಲೈ 9ರಂದು ಹಳಿಯಾಳ ಪುರಸಭೆಗೆ ಮುತ್ತಿಗೆ ಹಾಕಲು ಯೋಜಿಸಲಾಗಿದೆ. ಕುರಿ ಮಾಂಸ ಹಾಗೂ ಮೀನು ಮಾರುಕಟ್ಟೆಗಳಿದ್ದರೂ ಇಂದು ಪಟ್ಟಣದ ತುಂಬೆಲ್ಲ ಮೀನು, ಕುರಿ ಮಾಂಸದ ಮಾರಾಟ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತಿದೆ ಎಂದರು. ಚಿಕನ್, ಮಟನ್ ಹಾಗೂ ಮೀನು ಮಾರಾಟಕ್ಕೆ ಪುರಸಭೆಯವರು ಸ್ಥಳವನ್ನು ನಿಗದಿ ಪಡಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ, ಎಸ್.ಎಂ.ಹೂಲಿ, ವಿ.ಎಮ್.ಪಾಟೀಲ, ಎಸ್.ಎ.ಶೆಟವಣ್ಣನವರ, ವಿಲಾಸ ಯಡವಿ, ಗಣಪತಿ ಕರಂಜೇಕರ ಇದ್ದರು.
Leave a Comment